ಮುಂಬೈ: ಫಾರ್ಮ್ ಕಳೆದುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಕನ್ನಡದವರೇ ಆದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರ ತೀವ್ರ ಟೀಕೆಯ ನಡುವೆ ದೆಹಲಿಯ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಹುಲ್ ಪರ ಮಾತನಾಡಿದ್ದಾರೆ.
ಕೆಲವೊಮ್ಮೆ ನಾವು ಪ್ರತಿಭೆಗಳನ್ನು ಬೆಂಬಲಿಸಬೇಕಾಗುತ್ತದೆ. ಕೆ.ಎಲ್. ರಾಹುಲ್ ಅವರನ್ನು ಬೆಂಬಲಿಸಿದ ರೋಹಿತ್ ಶರ್ಮಾ ಅವರನ್ನು ಪ್ರಶಂಸಿಸುತ್ತೇನೆ. ಅವರ ವೃತ್ತಿಜೀವನವೂ ಆರಂಭದಲ್ಲಿ ಇದೇ ರೀತಿ ಇತ್ತು. ಈಗ ರೋಹಿತ್ ಶರ್ಮಾ ಎಂತಹ ಆಟಗಾರರಾಗಿದ್ದಾರೆ ಎಂಬುದನ್ನು ನೋಡಬಹುದು ಎಂದು ಅವರು ಎಎನ್ ಐ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾದರೂ ರಾಹುಲ್ ಗೆ ಮಣೆ: ಆಯ್ಕೆದಾರರ ನಡೆ ಟೀಕಿಸಿದ ಕರ್ನಾಟಕದ ಮಾಜಿ ವೇಗಿ ವೆಂಕಿ
ಕೆಎಲ್ ರಾಹುಲ್ ಅವರನ್ನು ಭಾರತ ತಂಡದಿಂದ ಕೈಬಿಡಬಾರದು. ಯೊವೊಬ್ಬ ಆಟಗಾರನನ್ನು ಪ್ರತ್ಯೇಕಿಸಬಾರದು. ಪ್ರತಿಯೊಬ್ಬರೂ ಕೂಡಾ ಕಳಪೆ ಫಾರ್ಮ್ ಗೆ ಹೋಗುತ್ತಾರೆ. ಯಾರೂ ಕೂಡಾ ಅವರು ಚೆನ್ನಾಗಿ ಆಡುತ್ತಿಲ್ಲ, ಕೈ ಬಿಡಬಾರದು ಎಂದು ಹೇಳಬಾರದು ಎಂದು ಗೌತಮ್ ಗಂಭೀರ್ ಹೇಳಿದರು.
ರಾಹುಲ್ ವೈಫಲ್ಯದ ಬಗ್ಗೆ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಕುರಿತಂತೆ ಹಲವು ಮಾತುಗಳು ಕೇಳಿಬರುತ್ತಿವೆ. ಆದರೆ, ನಾನಾಗಲಿ, ತಂಡದ ಆಡಳಿತ ಮಂಡಳಿಯಾಗಲಿ, ಬ್ಯಾಟರ್ ಸಾಮರ್ಥ್ಯವನ್ನು ಪರಿಗಣಿಸುತ್ತೇವೆ. ರನ್ ಗಳಿಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಗುತ್ತದೆ. ಅದು ರಾಹುಲ್ ಗೆ ಮಾತ್ರವಲ್ಲ ಎಂದು ಹೇಳಿದ್ದರು.