ಕ್ರಿಕೆಟ್

ವಿಶ್ವಕಪ್ ಕ್ರಿಕೆಟ್ ನಲ್ಲಿ ಜಯ್​ ಶಾ ವಾಮಾಚಾರದಿಂದ ಪಾಕಿಸ್ತಾನಕ್ಕೆ​ ಸೋಲು: ಟಿಕ್‌ಟಾಕರ್ ಹರೀಮ್ ಶಾ ಆರೋಪ

Shilpa D

ಮುಂಬಯಿ: ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತು ಪಾಕಿಸ್ತಾನದ ಹೇಳಿಕೆಗೆ ಸರಿಹೊಂದುವಂತಿದೆ. ಈ ಬಾರಿ ಪಾಕಿಸ್ತಾನ ತಂಡದ ಸೋಲಿಗೆ ಕಾರಣ ಭಾರತದ ಮಾಟಮಂತ್ರವೇ ಕಾರಣವಂತೆ.

ಕಳೆದ ಶನಿವಾರ ಅಹಮದಾಬಾದ್​ನಲ್ಲಿ ನಡೆದ ಭಾರತ ವಿರುದ್ಧದ ಏಕದಿನ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್​ಗಳ ಸೋಲು ಕಂಡಿತು. ಈ ಸೋಲಿಗೆ ಕೇಂದ್ರ ಗೃಹ ಸಚಿವ ಅಮೀತ್​ ಶಾ ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಮಾಟ-ಮಂತ್ರವೇ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಟಿವಿ ನಿರೂಪಕಿ ಹಾಗೂ ಟಿಕ್​-ಟಾಕ್​ ಸ್ಟಾರ್​ ಹರೀಮ್​ ಶಾ ಗಂಭೀರ ಆರೋಪ ಮಾಡಿದ್ದಾರೆ.

ಹರೀಮ್​ ಶಾ

ಟ್ವಿಟರ್​ನಲ್ಲಿ ದೊಡ್ಡದಾದ ಟಿಪ್ಪಣಿಯನ್ನೇ ಬರೆದಿರುವ ಹರೀಮ್​ ಶಾ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ಕ್ರಿಕೆಟ್‌ ತಂಡ ಸೋಲುವಂತೆ ಮಾಟ-ಮಂತ್ರದ ಮೊರೆ ಹೋಗಿದ್ದಾರೆ. ಈ ವಿಚಾರ ನನಗೆ ಬಲ್ಲ ಮೂಲಗಳಿಂದ ತಿಳಿದಿದೆ. ಮಾಟ-ಮಂತ್ರ ಮಾಡಲು ಪ್ರಸಿದ್ಧ ಜಾದೂ ತಜ್ಞ ಕಾರ್ತಿಕ್ ಚಕ್ರವರ್ತಿ ಅವರಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ ಎಂದು ಟ್ವಿಟ್ಟರ್‌ ನಲ್ಲಿ ಬರೆದಿದ್ದಾರೆ.​

ಜಯ್​ ಶಾ ಅವರ ದುಷ್ಕೃತ್ಯದ ಬಗ್ಗೆ ಐಸಿಸಿ ಸಮಗ್ರ ತನಿಖೆ ನಡೆಸಬೇಕು ಅಲ್ಲದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರೀಮ್​ ಶಾ ಆಗ್ರಹಿಸಿದ್ದಾರೆ. ‘ಪಾಕಿಸ್ತಾನ ತಂಡ ಒಂದು ಹಂತದಲ್ಲಿ 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಆ ಬಳಿಕ ಹಠಾತ್​ ಕುಸಿತ ಕಂಡು 36 ರನ್​ ಅಂತರದಲ್ಲಿ ಎಲ್ಲ ವಿಕೆಎಟ್​ ಕಳೆದುಕೊಂಡು ಸಂಕಷ್ಟ ಎದುರಿಸಿತು. ಇದರ ಹಿಂದಿರುವ ಶಕ್ತಿ ಭಾರತೀಯ ಬೌಲರ್​ಗಳದಲ್ಲ. ಬದಲಾಗಿ ಇದು ಜಯ್​ ಶಾ ಅವರ ಮಾಟ-ಮಂತ್ರದ ತಂತ್ರ ಎಂದು ಹೇಳಿದ್ದಾರೆ.

ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮೂರನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ಆಡಿದಾಗ ಪಾಕಿಸ್ತಾನ ತಂಡ ಬಲವಾಗಿ ಮುನ್ನಡೆದಿತ್ತು. ಇದರ ನಂತರ ಬಾಬರ್ ಔಟಾದ ತಕ್ಷಣ, ಮುಂದಿನ 36 ರನ್‌ಗಳ ಒಳಗೆ ಅವರ ಸಂಪೂರ್ಣ ಬ್ಯಾಟಿಂಗ್ ಪ್ರದರ್ಶನ ಕುಸಿಯಿತು ಎಂದು ಹರೀಮ್ ಹೇಳಿದ್ದಾರೆ. ಇದಕ್ಕೆ ಬ್ಲ್ಯಾಕ್ ಮ್ಯಾಜಿಕ್ ಮಾಡಿರುವುದೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

SCROLL FOR NEXT