ನವದೆಹಲಿ: ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಶನಿವಾರ (ಸೆಪ್ಟೆಂಬರ್ 2) ಮುಂಬೈಗೆ ಮರಳಿದ್ದರು.
ಪಾಕಿಸ್ತಾನದ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಡೆಲಿವರಿ ದಿನಾಂಕ ಅಂದೇ ಆಗಿದ್ದರಿಂದ ತಾವು ಮಗುವಿನ ಜನನದ ಸಮಯದಲ್ಲಿ ಪತ್ನಿ ಜೊತೆಗೆ ಇರಲು ಬಯಸಿದ್ದರು. ಅದಕ್ಕಾಗಿಯೇ ಅವರು ನೇಪಾಳ ವಿರುದ್ಧದ ಪಂದ್ಯವನ್ನು ಆಡದೇ ಭಾರತಕ್ಕೆ ಮರಳಲು ನಿರ್ಧರಿಸಿದರು.
ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಭಾನುವಾರ (ಸೆಪ್ಟೆಂಬರ್ 10) ನಡೆಯಲಿದ್ದು, ಎರಡೂ ತಂಡಗಳಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಓವರ್ಗಳಲ್ಲಿ ವಿಕೆಟ್ಗಳನ್ನು ಕೀಳಲು ಭಾರತದ ವೇಗದ ಬೌಲರ್ಗಳು ಕಷ್ಟಪಟ್ಟಿದ್ದರಿಂದ, ಈ ಪಂದ್ಯಕ್ಕೂ ಮುನ್ನ ಬುಮ್ರಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಭಾರತಕ್ಕೆ ನಿರಾಳವಾಗಿದೆ. ಏಷ್ಯಾಕಪ್ 2023ರ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಸ್ಪ್ರೀತ್ ಬುಮ್ರಾ ಬ್ಯಾಟ್ನೊಂದಿಗೆ ಉತ್ತಮ ಕೊಡುಗೆ ನೀಡಿದರು. ಅವರು 14 ಎಸೆತಗಳಲ್ಲಿ 16 ರನ್ ಗಳಿಸಿದರು.
ಇದನ್ನೂ ಓದಿ: ಏಷ್ಯಾ ಕಪ್ 2023: ಕೊನೆಗೂ ಬಿಸಿಸಿಐ ಮನವೊಲಿಸಿದ ಪಿಸಿಬಿ, ಭಾರತ-ಪಾಕ್ ಪಂದ್ಯಕ್ಕೆ ಹೆಚ್ಚುವರಿಯಾಗಿ ಒಂದು ದಿನ ಮೀಸಲು
ಇಂದು ಜಸ್ಪ್ರೀತ್ ಬುಮ್ರಾ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ತಂಡದೊಂದಿಗೆ ಅಭ್ಯಾಸ ಸೆಷನ್ನಲ್ಲಿ ಭಾಗವಹಿಸಿದ್ದರು. ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯಕ್ಕೆ ಸೆಪ್ಟೆಂಬರ್ 10ರ ಭಾನುವಾರದಂದು ಮೀಸಲು ದಿನವನ್ನು ಹೊಂದಲು ನಿರ್ಧರಿಸಿದೆ.
ಆದಾಗ್ಯೂ, ಶ್ರೀಲಂಕಾದಲ್ಲಿ ನಡೆಯಲಿರುವ ಇತರ ಸೂಪರ್ ಫೋರ್ ಪಂದ್ಯಗಳಿಗೆ ಕಾಯ್ದಿರಿಸಿದ ದಿನವನ್ನು ಹೊಂದಿರಲಿಲ್ಲ. ಆದರೆ ಇದೀಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮರುದಿನದ ಆಟ ನಿಲ್ಲಿಸಿದ ಸ್ಥಳದಿಂದ ಪುನರಾರಂಭವಾಗುತ್ತದೆ.