ಐಪಿಎಲ್ 2025ರ ಆವೃತ್ತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಬಹುತೇಕರು ಮೆಚ್ಚುಗೆ ಸೂಚಿಸಿದ್ದಾರೆ. 35 ಎಸೆತಗಳಲ್ಲೇ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಮತ್ತು ಅತ್ಯಂತ ವೇಗದ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆರ್ಆರ್ ತಂಡದ ಅಭಿಮಾನಿಗಳು ವೈಭವ್ ಅವರು ಶತಕ ಸಿಡಿಸುತ್ತಿದ್ದಂತೆ ಸಂಭ್ರಮಾಚರಣೆ ಮಾಡಿದರು. ಆಗ, ಆರ್ಆರ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ತಮ್ಮ ವ್ಹೀಲ್ಚೇರ್ನಿಂದ ಎದ್ದು ಚಪ್ಪಾಳೆ ತಟ್ಟಿದರು. ದ್ರಾವಿಡ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಓಡಾಡಲು ವ್ಹೀಲ್ಚೇರ್ ಬಳಸುತ್ತಿದ್ದಾರೆ. ಆದಾಗ್ಯೂ, ಸೂರ್ಯವಂಶಿ ಅವರ ಐತಿಹಾಸಿಕ ಸಾಧನೆ ವೇಳೆ ಗಾಯವನ್ನು ಮರೆತು ಎದ್ದುನಿಂತು ಚಪ್ಪಾಳೆ ತಟ್ಟಿ ಯುವ ಆಟಗಾರನನ್ನು ಪ್ರೋತ್ಸಾಹಿಸಿದರು.
ಅವರ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಆರ್ಆರ್ ತಂಡದ ವ್ಯವಸ್ಥಾಪಕಿ ರೋಮಿ ಭಿಂದರ್, 'ಒಬ್ಬ ಉತ್ತಮ ತರಬೇತುದಾರನಿಗೆ ಇದು ತುಂಬಾ ಸಂತೋಷದ ಸಂಗತಿ. ಏಕೆಂದರೆ, ಹರಾಜಿನಲ್ಲಿ ವೈಭವ್ ಅವರನ್ನು ರಾಹುಲ್ ಅವರು ಆಯ್ಕೆ ಮಾಡಿಕೊಂಡಿದ್ದರು ಮತ್ತು ಅಭ್ಯಾಸದ ವೇಳೆಯಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಈ ಫಲಿತಾಂಶವನ್ನು ನೋಡಿದಾಗ, ರಾಹುಲ್ ದ್ರಾವಿಡ್ ತುಂಬಾ ಸಂತೋಷಪಡುತ್ತಾರೆ ಮತ್ತು ನಮ್ಮಲ್ಲಿಯೂ ಕೆಲವು ಗಂಭೀರ ಪ್ರತಿಭೆಗಳಿವೆ ಎಂದು ಭಾವಿಸುತ್ತಾರೆ. ನಾವು ಈ ಗಂಭೀರ ಪ್ರತಿಭೆಯನ್ನು ದೇಶಕ್ಕೆ ನೀಡಲು ಪ್ರಯತ್ನಿಸುತ್ತಿದ್ದೇವೆ. ರಾಹುಲ್ ಅವರು ವೈಭವ್ ಅವರನ್ನು ಅಪ್ಪಿಕೊಂಡು ಶುಭ ಹಾರೈಸಿದರು. ನಮಗೆ ಅವರಂತಹ ಇನ್ನೂ ಅನೇಕರು ಬೇಕು' ಎಂದು ಸ್ಪೋರ್ಟ್ಸ್ ಟುಡೇಗೆ ತಿಳಿಸಿದರು.
ಸಿಎಸ್ಕೆ ವಿರುದ್ಧದ ಹಿಂದಿನ ಪಂದ್ಯದ ನಂತರ, ವೈಭವ್ ಸೂರ್ಯವಂಶಿ ದಂತಕಥೆ ಎಂಎಸ್ ಧೋನಿ ಅವರನ್ನು ಭೇಟಿಯಾದರು ಮತ್ತು ವಿಕೆಟ್ ಕೀಪರ್-ಬ್ಯಾಟರ್ ಆರ್ಆರ್ನ 'ಬಾಸ್ ಬೇಬಿ'ಯನ್ನು ಹೊಗಳಿದರು ಎಂದು ಭಿಂದರ್ ಬಹಿರಂಗಪಡಿಸಿದರು.
'ಹೌದು, ನಾವು ಗುವಾಹಟಿಯಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ವೈಭವ್ ಧೋನಿಯನ್ನು ಭೇಟಿಯಾದರು. ಸಿಎಸ್ಕೆ ವಿರುದ್ಧದ ನಮ್ಮ ಮುಂಬರುವ ಪಂದ್ಯದಲ್ಲೂ ಅವರು ಧೋನಿಯನ್ನು ಮತ್ತೆ ಭೇಟಿಯಾಗುತ್ತಾರೆ. ಆದರೆ, ನಾವು ಇಬ್ಬರಲ್ಲೂ ಒಂದೇ ರೀತಿಯ ಗುಣಗಳನ್ನು ನೋಡಬಹುದು. ಇಬ್ಬರೂ ಶಾಂತ ಮತ್ತು ಕೂಲ್ ಆಗಿರುತ್ತಾರೆ. ಆದರೆ, ಇನ್ನೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ಆದ್ದರಿಂದ ಇಬ್ಬರಿಗೂ ಕೆಲವು ಹೋಲಿಕೆಗಳಿವೆ' ಎಂದು ಭಿಂದರ್ ಹೇಳಿದರು.
'ಎಂಎಸ್ ಧೋನಿ ಕೂಡ ಅವರನ್ನು ತುಂಬಾ ಹೊಗಳಿದರು. 'ನೀವು ನಿಮ್ಮ ತಂಡದಲ್ಲಿ ಮಗುವನ್ನು ಹೊಂದಿದ್ದೀರಿ. ಆದರೆ, ಆ ಮಗು ಪ್ರಬುದ್ಧ ಆಟಗಾರನಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ' ಎಂದು ಹೇಳಿದ್ದಾಗಿ ತಿಳಿಸಿದರು.
ಇಷ್ಟೇ ಅಲ್ಲದೆ, ವೈಭವ್ ಸೂರ್ಯವಂಶಿ ಅವರು ವಿರಾಟ್ ಕೊಹ್ಲಿ ಜೊತೆಗೂ ಮಾತನಾಡಿದ್ದು, ಅವರು ಅವರಿಗೆ ಪ್ರಮುಖ ಪಾಠಗಳನ್ನು ನೀಡಿದರು. ವಿರಾಟ್ ಕೊಹ್ಲಿ ಅವರನ್ನು ವೈಭವ್ ತುಂಬಾ ಇಷ್ಟಪಡುತ್ತಾರೆ. ಇಬ್ಬರು ಭೇಟಿಯಾದಾಗ ಕೊಹ್ಲಿ ಒಂದೆರಡು ಸಲಹೆಗಳನ್ನು ಹಂಚಿಕೊಂಡರು. ಡೌನ್ ಟು ಅರ್ಥ್ ಆಗಿರುವುದು ಹೇಗೆ, ಹಂಬಲ್ ಆಗಿರುವುದು ಹೇಗೆ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ವಿರಾಟ್ ಕೊಹ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ' ಎಂದು ಭಿಂದರ್ ಹೇಳಿದರು.