ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡದ ಆಡಳಿತ ಮಂಡಳಿಯು ವಿಭಿನ್ನ ಆಯ್ಕೆಗಳ ಬಗ್ಗೆ ಯೋಚಿಸುತ್ತಿರುವಾಗ, ಯಾವ ಆಟಗಾರರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ಹಲವು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜಸ್ಪ್ರೀತ್ ಬುಮ್ರಾ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇರುವುದರಿಂದ, ಅವರ ಬದಲಿಗೆ ಯಾರನ್ನು ತಂಡಕ್ಕೆ ಕರೆತರಬೇಕು ಎನ್ನುವ ಕುರಿತು ಇದೀಗ ಗೊಂದಲ ಉಂಟಾಗಿದೆ. ವೇಗಿಗಳಾದ ಆಕಾಶ್ ದೀಪ್ ಮತ್ತು ಅರ್ಶದೀಪ್ ಸಿಂಗ್ ಬದಲಿ ಆಯ್ಕೆಗಳಾಗಿದ್ದರೆ, ಸ್ಪಿನ್ನರ್ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಅವರ ಹೆಸರುಗಳು ಸಹ ಮುನ್ನಲೆಗೆ ಬಂದಿವೆ.
ಸ್ಪಿನ್-ಬೌಲಿಂಗ್ ಆಲ್ರೌಂಡರ್ ವಾಷಿಗ್ಟಂನ್ ಸುಂದರ್ ಅವರೇ ಕುಲದೀಪ್ ಅವರಿಗಿಂತ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಕೆಲವರು ಸೂಚಿಸುತ್ತಿದ್ದಾರೆ. ಆದಾಗ್ಯೂ, ಕುಲದೀಪ್ ಅವರನ್ನು ಮತ್ತೆ ಕೈಬಿಟ್ಟರೆ ಅದು 'ಅನ್ಯಾಯ' ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಸದ್ಯದ ಕ್ರಿಕೆಟ್ನ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾದ ಕುಲ್ದೀಪ್ ಯಾದವ್, ತಮ್ಮಲ್ಲಿ ಪ್ರತಿಭೆ ಇದ್ದರೂ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್ಮನ್ ಗಿಲ್ ಅವರು ಕುಲ್ದೀಪ್ಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು. ಸ್ಪಿನ್ನರ್ರನ್ನು ನಿರ್ಲಕ್ಷಿಸಲು ಈ ಇಬ್ಬರಿಗೆ ಯಾವುದೇ ಕಾರಣವಿಲ್ಲ ಎಂದು ಕೈಫ್ ಭಾವಿಸುತ್ತಾರೆ.
ರವಿಚಂದ್ರನ್ ಅಶ್ವಿನ್ ಅವರ ಉಪಸ್ಥಿತಿಯು ಕುಲದೀಪ್ ಅವರನ್ನು ಟೆಸ್ಟ್ ತಂಡದಿಂದ ದೀರ್ಘಕಾಲ ದೂರವಿಟ್ಟಿತ್ತು. ಆದರೆ, ಮಾಜಿ ಆಟಗಾರನ ನಿವೃತ್ತಿಯು ತಂಡದಲ್ಲಿ ಎರಡನೇ ಸ್ಪಿನ್ನರ್ ಸ್ಥಾನವನ್ನು ತೆರೆದಿಟ್ಟಿದೆ. ಗಂಭೀರ್, ಗಿಲ್ ಮತ್ತು ತಂಡದ ಆಡಳಿತ ಮಂಡಳಿಯನ್ನು ಕುಲದೀಪ್ಗೆ ಆ ಸ್ಥಾನವನ್ನು ನೀಡುವಂತೆ ಕೈಫ್ ಒತ್ತಾಯಿಸಿದ್ದಾರೆ.
'ಎರಡನೇ ಟೆಸ್ಟ್ಗೆ ಕುಲದೀಪ್ ಯಾದವ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳದಿದ್ದರೆ ಅದು ಅನ್ಯಾಯವಾಗುತ್ತದೆ. ಅವರು 8 ವರ್ಷಗಳಲ್ಲಿ ಕೇವಲ 13 ಟೆಸ್ಟ್ಗಳನ್ನು ಆಡಿದ್ದಾರೆ. ಈ ಹಿಂದೆ, ಅಶ್ವಿನ್ ಅವರ ಕಾರಣದಿಂದಾಗಿ ಅವರನ್ನು ಹೊರಗಿಡಲಾಗಿತ್ತು. ಈಗಲೂ ಅವರನ್ನು ಹೊರಗಿಡುವುದನ್ನು ನೀವು ಹೇಗೆ ಸಮರ್ಥಿಸುತ್ತೀರಿ' ಎಂದು ಕೈಫ್ ಎಕ್ಸ್ನಲ್ಲಿ ಬರೆದಿದ್ದಾರೆ.
ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಐದು ಶತಕಗಳನ್ನು ಗಳಿಸಿದ್ದರೂ, ನಿಗದಿತ 371 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾದ ನಂತರ ಟೀಂ ಇಂಡಿಯಾ ಸರಣಿಯಲ್ಲಿ 0-1 ರಿಂದ ಹಿನ್ನಡೆ ಸಾಧಿಸಿತು. ತಂಡವು ಮತ್ತೆ ಪುಟಿದೇಳುವ ಪ್ರಯತ್ನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೋಡುತ್ತಿರುವುದರಿಂದ, ಅವರ ಗಮನ ಬೌಲಿಂಗ್ ಸಂಯೋಜನೆಯ ಮೇಲೆ ಹೆಚ್ಚಿದೆ.