ನವದೆಹಲಿ: ಐಪಿಎಲ್ 2026ರ 39ನೇ ಪಂದ್ಯದಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೆಂಗಳೂರಿನ ಎಂ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 75 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. 76 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ 6.3 ಓವರ್ ಗೆ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಬೆಂಗಳೂರು ಪರ ಬೆಥಲ್ 20 ರನ್ ಗಳಿಸಿ ಔಟಾದರು. ಇನ್ನು ವಿರಾಟ್ ಕೊಹ್ಲಿ ಅಜೇಯ 23 ಮತ್ತು ದೇವದತ್ ಪಡಿಕ್ಕಲ್ ಅಜೇಯ 34 ರನ್ ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಐಪಿಎಲ್ 2026ರ 39ನೇ ಪಂದ್ಯದಲ್ಲಿ, RCB ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್ವುಡ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿನಾಶಕಾರಿ ಆಟವಾಡಿದರು. ಈ ಇಬ್ಬರು ಬೌಲರ್ಗಳು ಒಟ್ಟಾಗಿ ಕೇವಲ ಎಂಟು ರನ್ಗಳಿಗೆ ಆರು ವಿಕೆಟ್ಗಳನ್ನು ಕಬಳಿಸಿದರು. ಕೇವಲ 23 ಎಸೆತಗಳಲ್ಲಿ ಡೆಲ್ಲಿ ಕೆಎಲ್ ರಾಹುಲ್, ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ ಮತ್ತು ಯುವ ಬ್ಯಾಟ್ಸ್ಮನ್ ಸಾಹಿಲ್ ಪರಾಖ್ ಅವರನ್ನು ಕಳೆದುಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇಂತಹ ದಿನ ನೋಡಿದ್ದು ಇದೇ ಮೊದಲು.
ದೆಹಲಿಗೆ ಮುಜುಗರದ ದಾಖಲೆ
ಆರ್ ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ದೆಹಲಿ ತಂಡವು ಮುಜುಗರದ ದಾಖಲೆಯನ್ನು ಬರೆಯಿತು. ಪವರ್ ಪ್ಲೇನಲ್ಲಿ ಅವರು ಕಡಿಮೆ ಸ್ಕೋರ್ ಗಳಿಸಿದ ತಂಡವಾಯಿತು. ದೆಹಲಿ ಪವರ್ ಪ್ಲೇನಲ್ಲಿ ಕೇವಲ 13 ರನ್ ಗಳಿಸಿ ಆರು ವಿಕೆಟ್ ಗಳನ್ನು ಕಳೆದುಕೊಂಡಿತು. ಪವರ್ಪ್ಲೇನಲ್ಲಿ ತಂಡವೊಂದು ಇಷ್ಟು ಕಡಿಮೆ ರನ್ ಗಳಿಸಿ ಐದು ವಿಕೆಟ್ಗಳಿಗಿಂತ ಹೆಚ್ಚು ಕಳೆದುಕೊಂಡಿರುವುದು ಇದೇ ಮೊದಲು. ಐಪಿಎಲ್ 2026 ರಲ್ಲಿ ದೆಹಲಿ ತಂಡವು ಉತ್ತಮವಾಗಿ ಆರಂಭವಾದರೂ, ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ. ಈ ಋತುವಿನಲ್ಲಿ ತಂಡವು ಪವರ್ಪ್ಲೇಗೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ತೋರುತ್ತಿದೆ.