ನವದೆಹಲಿ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದ್ದು, ಭಾರತದ ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕಳೆದ ತಿಂಗಳು ಭಾರತ ‘ಎ’ ತಂಡದ ಶ್ರೀಲಂಕಾ ಪ್ರವಾಸದ ವೇಳೆ ಕಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಪ್ರತಿಭಾವಂತ ಅಗ್ರ ಕ್ರಮಾಂಕದ ಬ್ಯಾಟರ್ ಬಿ. ಸಾಯಿ ಸುದರ್ಶನ್ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದಾರೆ.
ಎರಡು ‘ಎ’ ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದ ಸುದರ್ಶನ್, ಶ್ರೀಲಂಕಾ ‘ಎ’ ವಿರುದ್ಧದ ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಅಂದಿನಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನಶ್ಚೇತನ ಚಿಕಿತ್ಸೆಗೆ ಒಳಗಾಗಿದ್ದರು.
“ಸಾಯಿ ಸುದರ್ಶನ್ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ದೇಹದ ಗಾಯ ಗುಣಮುಖವಾಗಲು ವೈದ್ಯರು ಇನ್ನಷ್ಟು ಸಮಯ ಅಗತ್ಯ ಎಂದು ಸಲಹೆ ನೀಡಿದ್ದಾರೆ.
ಗಮನಾರ್ಹ ಚೇತರಿಕೆ ಕಂಡುಬಂದಿದ್ದರೂ, ಟೆಸ್ಟ್ ಕ್ರಿಕೆಟ್ಗೆ ಸುರಕ್ಷಿತವಾಗಿ ಮರಳಲು ಇದು ಇನ್ನೂ ಸಾಕಾಗುವುದಿಲ್ಲ” ಎಂದು ಸುದರ್ಶನ್ ಅವರ ಪುನಶ್ಚೇತನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಕ್ರೀಡಾ ವಿಜ್ಞಾನ ತಂಡ ತಿಳಿಸಿದೆ. ಕ್ರೀಡಾ ವಿಜ್ಞಾನ ತಂಡವು ಈ ಕುರಿತು ತಂಡದ ಆಡಳಿತ ಮಂಡಳಿ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿಗೆ ಮಾಹಿತಿ ನೀಡಿದೆ.
ನಿಕಟ ಮೇಲ್ವಿಚಾರಣೆ
ಸುದರ್ಶನ್ ಅವರ ವೈದ್ಯಕೀಯ ಮತ್ತು ಫಿಟ್ನೆಸ್ ಸಲಹೆಯಲ್ಲಿ, “ಪುನಶ್ಚೇತನ, ಶಕ್ತಿ ಮತ್ತು ಕಂಡೀಷನಿಂಗ್ ಹಾಗೂ ಕ್ರಿಕೆಟ್ಗೆ ಸಂಬಂಧಿಸಿದ ದೈಹಿಕ ಚಟುವಟಿಕೆಗಳನ್ನು ಕ್ರಮೇಣ ಹೆಚ್ಚಿಸಬೇಕು. ಇದನ್ನು ನಿಕಟ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಗಾಯ ಮತ್ತೆ ಸಂಭವಿಸುವ ಅಥವಾ ಮತ್ತಷ್ಟು ಸಮಸ್ಯೆಗಳು ಎದುರಾಗುವ ಅಪಾಯವನ್ನು ಕಡಿಮೆ ಮಾಡುವುದು ಹಾಗೂ ದೀರ್ಘಾವಧಿಯ ಪ್ರದರ್ಶನವನ್ನು ಕಾಪಾಡುವುದು ಈ ಎಚ್ಚರಿಕೆಯ ವಿಧಾನದ್ದಾಗಿದೆ” ಎಂದು ತಿಳಿಸಲಾಗಿದೆ.
ಸುದರ್ಶನ್ ಅನುಪಸ್ಥಿತಿಯಲ್ಲಿ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಆಡಲಿದ್ದಾರೆ. ತಂಡದಲ್ಲಿ ಸುದರ್ಶನ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮುಂಬೈನ ಅನುಭವಿ ಆಟಗಾರ ಸರ್ಫರಾಜ್ ಖಾನ್ ಉತ್ತಮ ಆಯ್ಕೆಯಾಗಿ ಕಾಣಿಸುತ್ತಾರೆ. ಆದರೆ ಕೋಚಿಂಗ್ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿಯ ಪ್ರಮುಖ ಸದಸ್ಯರೊಬ್ಬರಿಗೆ ಅವರ ಮೇಲೆ ಹೆಚ್ಚಿನ ವಿಶ್ವಾಸವಿಲ್ಲ ಎನ್ನಲಾಗಿದೆ.