ಕೆಎಲ್ ರಾಹುಲ್ 
ಕ್ರಿಕೆಟ್

'ಯಾವುದೇ ಮುಜುಗರ ಅಥವಾ ಅಹಂಕಾರವಿಲ್ಲ': ಭಾರತೀಯ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ತಂಡದ ಅತ್ಯಂತ ಹಿರಿಯ ಆಟಗಾರನಾಗಿ, ಯುವ ಪ್ರತಿಭೆಗಳು ತಕ್ಷಣವೇ ಪ್ರಭಾವ ಬೀರುವುದನ್ನು ಮತ್ತು ಅತ್ಯುನ್ನತ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದನ್ನು ಕಂಡು ರಾಹುಲ್ ಸಂತಸ ವ್ಯಕ್ತಪಡಿಸಿದರು.

ಬುಧವಾರ ಗಾಲೆಯಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 372 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವು ಸ್ಪಿನ್ನರ್ ಮಾನವ್ ಸುತಾರ್ ಅವರ ದಾಳಿಗೆ ತತ್ತರಿಸಿತು; ಸುತಾರ್ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆತಿಥೇಯ ತಂಡವನ್ನು 206 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದರೊಂದಿಗೆ ದೇವದತ್ ಪಡಿಕ್ಕಲ್, ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಕೂಡ ಭಾರತದ ಈ ಭರ್ಜರಿ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಪಂದ್ಯದ ನಂತರ ಮಾತನಾಡಿದ ರಾಹುಲ್, ಭಾರತೀಯ ತಂಡದ ಡ್ರೆಸ್ಸಿಂಗ್ ರೂಂನಲ್ಲಿರುವ ಸಕಾರಾತ್ಮಕ ವಾತಾವರಣವನ್ನು ಎತ್ತಿ ತೋರಿಸಿದರು ಮತ್ತು ಸವಾಲಿನ ಸಂದರ್ಭಗಳಲ್ಲಿ ತಂಡವು ತೋರಿದ ಉತ್ತಮ ಪ್ರದರ್ಶನವನ್ನು ಶ್ಲಾಘಿಸಿದರು.

ತಂಡದ ಅತ್ಯಂತ ಹಿರಿಯ ಆಟಗಾರನಾಗಿ, ಯುವ ಪ್ರತಿಭೆಗಳು ತಕ್ಷಣವೇ ಪ್ರಭಾವ ಬೀರುವುದನ್ನು ಮತ್ತು ಅತ್ಯುನ್ನತ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ ರಾಹುಲ್, ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಮುಕ್ತ ವಾತಾವರಣವನ್ನು ಹೊಂದಿದ್ದು, ಅಲ್ಲಿ ಆಟಗಾರರು ಮುಕ್ತವಾಗಿ ಸಂವಹನ ನಡೆಸಲು ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

'ಹಿರಿಯ ಆಟಗಾರರಾಗಿರಲಿ ಅಥವಾ ಕೇವಲ 26 ವರ್ಷ ವಯಸ್ಸಿನವರಾಗಿದ್ದು, ಕೇವಲ 20 ಟೆಸ್ಟ್ ಪಂದ್ಯಗಳನ್ನು ಆಡಿದವರಾಗಿರಲಿ, ಸಹ ಆಟಗಾರರಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ಆಟಗಾರನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ನಮ್ಮ ತಂಡದಲ್ಲಿ 60-70 ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರಿದ್ದಾಗಲೂ ಮತ್ತು ನಾನು ಕೇವಲ 20 ಅಥವಾ 30 ಪಂದ್ಯಗಳನ್ನಷ್ಟೇ ಆಡಿದ್ದಾಗಲೂ, 'ನಿಮ್ಮಿಂದ ನಾನು ಏನನ್ನೂ ಕಲಿಯಲಾರೆ' ಎಂದು ಭಾವಿಸುವ ಅಥವಾ 'ಅವರು ಅಷ್ಟೊಂದು ಪಂದ್ಯಗಳನ್ನು ಆಡಿದ್ದಾರೆ, ಹಾಗಾಗಿ ಅವರ ಬಳಿ ಹೋಗಿ ಮಾತನಾಡಬಾರದು' ಎಂದುಕೊಳ್ಳುವಂತಹ ಯಾವುದೇ ಸಂಕೋಚ ಅಥವಾ ಅಹಂಕಾರ ಆಟಗಾರರಲ್ಲಿ ಇಲ್ಲ. ಹೀಗಾಗಿ, ನಮ್ಮ ಡ್ರೆಸ್ಸಿಂಗ್ ರೂಂ ಯಾವಾಗಲೂ ಮುಕ್ತ ವಾತಾವರಣ ಹೊಂದಿದ್ದು, ಆಟಗಾರರು ಪರಸ್ಪರರಿಂದ ಕಲಿಯುತ್ತಲೇ ಬಂದಿದ್ದಾರೆ. ಕಲಿಕೆಯ ಪ್ರಕ್ರಿಯೆಗೆ ಹಿರಿಯ ಆಟಗಾರರೊಂದಿಗಿನ ಅಂತರ ಅಥವಾ 'ಸೀನಿಯಾರಿಟಿ' ಎಂದಿಗೂ ಅಡ್ಡಿಯಾಗಿಲ್ಲ' ಎಂದು ರಾಹುಲ್ ಹೇಳಿದರು.

'ನನಗಿಂತ ಕಿರಿಯ ಆಟಗಾರನೊಬ್ಬನಿಂದ ನಾನು ಒಂದೆರಡು ವಿಷಯಗಳನ್ನು ಕಲಿಯಬಹುದು. ಉದಾಹರಣೆಗೆ, 'ಸ್ವೀಪ್' ಮತ್ತು 'ರಿವರ್ಸ್ ಸ್ವೀಪ್' ಹೊಡೆತಗಳ ಬಗ್ಗೆ ನಾನು ಜೈಸ್ವಾಲ್ ಅವರೊಂದಿಗೆ ಮಾತನಾಡಿದಾಗ, ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಅವರ ಆಲೋಚನಾ ವಿಧಾನವು ನನ್ನದಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ ಮತ್ತು ನನ್ನ ವಿಧಾನವು ಮತ್ತೊಬ್ಬರಿಗಿಂತ ಭಿನ್ನವಾಗಿರಬಹುದು. ಹೀಗಾಗಿ, ಇದು ಕೇವಲ ಈ ಡ್ರೆಸ್ಸಿಂಗ್ ರೂಮ್‌ಗೆ ಮಾತ್ರ ಸೀಮಿತವಾದ ವಿಷಯವಲ್ಲ; ಇದು ಯಾವಾಗಲೂ ನಡೆಯುತ್ತಲೇ ಬಂದಿರುವ ಪ್ರಕ್ರಿಯೆ' ಎಂದು ಅವರು ಹೇಳಿದರು.

ಎಡಗೈ ಸ್ಪಿನ್ನರ್ ಮಾನವ್ ಸುತಾರ್ ನಿರಂತರವಾಗಿ ಸರಿಯಾದ ಜಾಗಗಳಲ್ಲಿ ಬೌಲ್ ಮಾಡುವ ಮೂಲಕ ಬ್ಯಾಟರ್‌ಗಳಿಗೆ ಕಷ್ಟಕರ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಅವರನ್ನು ನಿರಂತರ ಒತ್ತಡದಲ್ಲಿ ಇರಿಸುತ್ತಿದ್ದಾರೆ ಎಂದು ಹೇಳಿದರು.

ಅವರು ಒಂದೇ ಜಾಗದಿಂದ ಬೌಲಿಂಗ್ ಮಾಡುವಾಗಲೂ ಅತ್ಯಂತ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ದಿನವಿಡೀ ಸೂಕ್ಷ್ಮ ಬದಲಾವಣೆಗಳನ್ನು ಬಳಸಿಕೊಳ್ಳುವ ಮೂಲಕ ಅದನ್ನು ಸಾಧಿಸುತ್ತಾರೆ. ಹೀಗಾಗಿ, ಚೆಂಡು ಹೆಚ್ಚು ಚಲಿಸುತ್ತಿಲ್ಲ ಎಂದಾಗ ಬ್ಯಾಟ್ಸ್‌ಮನ್‌ಗಳು 'ನಾನೇನಾದರೂ ಮಾಡಲೇಬೇಕು' ಎಂದು ಯೋಚಿಸಲು ಪ್ರಾರಂಭಿಸುತ್ತಾರೆ; ಒಮ್ಮೆ ಬ್ಯಾಟ್ಸ್‌ಮನ್ ಅಂತಹ ಮನಸ್ಥಿತಿಗೆ ಬಂದಾಗ, ಆ ಹೋರಾಟದಲ್ಲಿ ನೀವು ಗೆದ್ದಂತೆಯೇ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pakಗೆ ಭಾರತ ಬಿಗ್ ಶಾಕ್: ದೆಹಲಿಯಲ್ಲಿ ಗರ್ಜಿಸಿದ ಬುಲ್ಡೋಜರ್; ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದ ಅನಧಿಕೃತ ನಿರ್ಮಾಣಗಳು ಧ್ವಂಸ..!

ಇರಾನ್ ಬೆನ್ನೆಲುಬು ಮುರಿಯಲು ಅಮೆರಿಕಾ ಪ್ಲ್ಯಾನ್: 'Economic D-Day' ಘೋಷಣೆ; ನೆರವು ನೀಡುವ ರಾಷ್ಟ್ರಗಳಿಗೂ ಕಾದಿದೆ ಗಂಡಾಂತರ..!

ಭಯೋತ್ಪಾದಕರ ರಕ್ಷಣೆಗೆ ವಿಶ್ವಸಂಸ್ಥೆ ವೇದಿಕೆ ಬಳಸದಿರಿ: ಪಾಕ್-ಚೀನಾಗೆ ಭಾರತದ ಖಡಕ್‌ ಎಚ್ಚರಿಕೆ

‘ಯಾವುದೇ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿಲ್ಲ’: ಸಚಿವ ನಾಗೇಂದ್ರ ಕುರಿತು DCM ಡಾ.ಜಿ.ಪರಮೇಶ್ವರ್ ಸಮರ್ಥನೆ

ಲೋಕಸಭೆ ಸದಸ್ಯ ಬಲ 25 ವರ್ಷ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಕಾಂಗ್ರೆಸ್ ಒತ್ತಾಯ; 2029ರಿಂದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಆಗ್ರಹ