ಕೊಲಂಬೊ: ಭಾನುವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರ ಪಾಕಿಸ್ತಾನ- ಭಾರತ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ, ಪಾಕ್ ಆಟಗಾರರ ಜೊತೆ ಹ್ಯಾಂಡ್’ಶೇಕ್ ಮಾಡುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಎದುರಾಳಿ ಆಟಗಾರರೊಂದಿಗೆ ಟೀಂ ಇಂಡಿಯಾ ಹ್ಯಾಂಡ್ ಶೇಕ್ ಮಾಡಲಿದೆಯೇ ಎಂಬುದರ ಬಗ್ಗೆ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್, ಮಹತ್ವದ ಸುಳಿವು ನೀಡಿದ್ದಾರೆ.
ಪ್ರಿಮ್ಯಾಚ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸೂರ್ಯ ಕುಮಾರ್ ಯಾದವ್, ಟಾಸ್ನಲ್ಲಿ ಹ್ಯಾಂಡ್ಶೇಕ್ ಬಗ್ಗೆ ನೋಡೋಣ. ಅದಕ್ಕೆ 24 ಗಂಟೆ ಕಾಯಿರಿ ಎಂದಷ್ಟೇ ಹೇಳಿದರು.
ಇನ್ನೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ ಶರ್ಮಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದರು. ಭಾರತೀಯ ಆಟಗಾರರು ಎದುರಾಳಿಯತ್ತ ಗಮನಹರಿಸದೆ ತಮ್ಮ ಮೇಲೆಯೇ ಗಮನಹರಿಸುತ್ತಾರೆ. ನಾವು ಹೇಗೆ ಆಡುತ್ತಿದ್ದೇವೋ ಅದನ್ನು ಮುಂದುವರಿಸಲು ಬಯಸುತ್ತೇವೆ. ನಾವು ನಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಯಾರು ಉತ್ತಮವಾಗಿ ಕ್ರಿಕೆಟ್ ಆಡುತ್ತಾರೋ ಅವರು ಪಂದ್ಯವನ್ನು ಗೆಲ್ಲುತ್ತಾರೆ. ಅದೊಂದೇ ಮುಖ್ಯ ಎಂದು ಅವರು ಹೇಳಿದರು.
ಇದಕ್ಕೂ ಮುನ್ನಾ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ, ನಾಳೆಯ ಪಂದ್ಯವನ್ನು ಒಳ್ಳೆಯ ಕ್ರೀಡಾಸ್ಫೂರ್ತಿಯಿಂದ ಆಡುತ್ತೇವೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಮುಖ್ಯವಲ್ಲ "ಎಂದು ಉತ್ತರಿಸಿದ್ದಾರೆ. ಆ ಮೂಲಕ, ಹಿಂದಿನ ಪಂದ್ಯದಲ್ಲಿ ಭಾರತ, ಕ್ರೀಡಾ ಮನೋಭಾವದಿಂದ ಆಡಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.