ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಿನ್ನೆಯ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲು ಖಚಿತವಾಗುತ್ತಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕ್ರೀಡಾಂಗಣದಿಂದ ಕಾಲ್ಕಿತ್ತ ಪ್ರಸಂಗ ನಡೆದಿದೆ.
ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲುಕಂಡಿತು. ಅಂತೆಯೇ ಈ ಭರ್ಜರಿ ಗೆಲುವಿನೊಂದಿಗೆ ಭಾರತ ಟೂರ್ನಿಯ ಸೂಪರ್ 8 ಹಂತ ಪ್ರವೇಶಿಸಿದ್ದು, ಗ್ರೂಪ್ ಎ ನಿಂದ ಸೂಪರ್ 8 ಪ್ರವೇಶಿಸಿದ ಮೊದಲ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ.
ಮೊದಲು ಬೌಲಿಂಗ್-ಬಳಿಕ ಬ್ಯಾಟಿಂಗ್.. ತಿಣುಕಾಡಿದ ಪಾಕಿಸ್ತಾನ
ಟಾಸ್ ಗೆದ್ದರೂ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ ಪಾಕಿಸ್ತಾನ ಭಾರತದ ಅಭಿಷೇಕ್ ಶರ್ಮಾರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿತಾದರೂ ಬಳಿಕ ಇಶಾನ್ ಕಿಶನ್ ರ ಸ್ಫೋಟಕ ಬ್ಯಾಟಿಂಗ್ ಗೆ ತತ್ತರಿಸಿತು.
ಇಶಾನ್ ಕಿಶನ್ 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 77 ರನ್ ಪೇರಿಸಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾದರು.
ಭಾರತ ನೀಡಿದ 176 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಭಾರತದ ಸ್ಪಿನ್ನರ್ ಗಳು ಅಪಾಯಕಾರಿಯಾಗುತ್ತಾರೆ ಎಂದು ಎಣಿಸಲಾಗಿತ್ತು. ಆದರೆ ತಮ್ಮ ಓವರ್ ನಲ್ಲೇ ವೇಗಿ ಬುಮ್ರಾ ಪಾಕಿಸ್ತಾನಕ್ಕೆ ಡಬಲ್ ಆಘಾತ ನೀಡಿದರು.
ಬಳಿಕ ಹಾರ್ದಿಕ್ ಪಾಂಡ್ಯಾ ಕೂಡ 2 ವಿಕೆಟ್ ಪಡೆದು ಪಾಕಿಸ್ತಾನಕ್ಕೆ ಮತ್ತೆ ಶಾಕ್ ಕೊಟ್ಟರು. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಾಕಿಸ್ತಾನ ಅಂತಿಮವಾಗಿ 18 ಓವರ್ ನಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 61 ರನ್ ಗಳ ಹೀನಾಯ ಸೋಲುಕಂಡಿತು.
ಪಂದ್ಯ ಮುಕ್ತಾಯಕ್ಕೂ ಮೊದಲೇ ಮೈದಾನದಿಂದ ಕಾಲ್ಕಿತ್ತ ಮೊಹ್ಸಿನ್ ನಖ್ವಿ
ಇನ್ನು ಈ ಪಂದ್ಯ ವೀಕ್ಷಣೆಗೆ ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯ ಮುಕ್ತಾಯಕ್ಕೂ ಮೊದಲೇ ಕ್ರೀಡಾಂಗಣ ತೊರೆದ ಪ್ರಸಂಗ ನಡೆದಿದೆ. ಅತ್ತ ಪಾಕಿಸ್ತಾನ ತಂಡದ ವಿಕೆಟ್ ಗಳು ಉರುಳುತ್ತಲೇ ತಂಡದ ಸೋಲು ಖಚಿತವಾಗಿತ್ತು.
ಹೀಗಾಗಿ ಮೊಹ್ಸಿನ್ ನಖ್ವಿ ಕ್ರೀಡಾಂಗಣದಲ್ಲಿ ಆಗಬಹುದಾಗಿದ್ದ ಮುಜುಗರ ತಪ್ಪಿಸಿಕೊಳ್ಳಲು ಕ್ರೀಡಾಂಗಣದಿಂದ ಕಾಲ್ಕಿತ್ತಿದ್ದಾರೆ.
ನಖ್ವಿ ಕ್ರೀಡಾಂಗಣ ತೊರೆಯುತ್ತಿರುವ ವಿಡಿಯೋಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ನಖ್ವಿ ಕಪ್ಪು ಬಣ್ಣದ ಕಾರಿನಲ್ಲಿ ಕ್ರೀಡಾಂಗಣದಿಂದ ನಿರ್ಗಮಿಸುವ ವಿಡಿಯೋ ಹರಿದಾಡುತ್ತಿದೆ. ನಖ್ವಿ ಕ್ರೀಡಾಂಗಣದಿಂದ ಬೇಗನೆ ನಿರ್ಗಮಿಸಲು ಅಧಿಕೃತ ಕಾರಣ ತಿಳಿದಿಲ್ಲವಾದರೂ, ಅವರು ನಿರ್ಗಮಿಸಿದ ಸಮಯಕ್ಕೆ ಪಾಕಿಸ್ತಾನ ಚೇಸಿಂಗ್ ತೀವ್ರ ಕುಸಿತ ಅನುಭವಿಸಿತ್ತು.