ನವದೆಹಲಿ: ಭಾನುವಾರ ನಡೆದ T20 ವಿಶ್ವಕಪ್ 2026 ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಕ್ರಿಕೆಟ್ ವಲಯದಲ್ಲಿ ತೀವ್ರ ಶಾಕ್ ನೀಡಿದೆ. ಸೋಲು-ಗೆಲುವು ಆಟದ ಭಾಗವಾಗಿದ್ದರೂ, ಸೂರ್ಯಕುಮಾರ್ ಯಾದವ್ ಅವರ ನಡೆ ಇದೀಗ ಚರ್ಚೆಯ ವಿಷಯವಾಗಿದೆ.
ಭಾರತದ ಸೋಲಿನ ಹಿಂದೆ ಹಲವು ಅಂಶಗಳಿದ್ದರೂ, ಪ್ಲೇಯಿಂಗ್ ಇಲೆವೆನ್ ನಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಇಲ್ಲದಿರುವುದು ದೊಡ್ಡದಾಗಿ ಚರ್ಚೆ ನಡೆಯುತ್ತಿದೆ. ಅಕ್ಷರ್ ಪಟೇಲ್ ಭಾರತದ T20I ತಂಡದಲ್ಲಿ ಉಪ ನಾಯಕನಾಗಿದ್ದರೂ ಮೊದಲ ಸೂಪರ್ 8 ಪಂದ್ಯದಲ್ಲಿ ಅವರನ್ನು ಕೈಬಿಡಲು ಟೀಮ್ ಮ್ಯಾನೇಜ್ ಮೆಂಟ್ ನಿರ್ಧಾರ ಸರಿಯಾಗಿರಲಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ.
ನಿವೃತ್ತಿಯ ನಂತರ ಕ್ರಿಕೆಟ್ ಪಂಡಿತರಂತೆ ಆಗಾಗ್ಗೆ ವಾಗ್ದಾಳಿ ನಡೆಸುವ ಆರ್ ಅಶ್ವಿನ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೈಬಿಟ್ಟು, ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ ಭಾರತದ ನಿರ್ಧಾರವನ್ನು ಟೀಕಿಸಿದ್ದಾರೆ.
ಭಾರತವು ಆಟದಲ್ಲಿ ಎರಡು ಪ್ರಮುಖ ಪ್ರಮಾದಗಳನ್ನು ಮಾಡಿದೆ: ಮೊದಲನೆಯದು, ಅಕ್ಸರ್ ಪಟೇಲ್ ಅವರನ್ನು ಕೈಬಿಡಲಾಯಿತು. ಮತ್ತೊಂದು, ರಿಂಕು ಸಿಂಗ್ ಅನ್ನು ನಂ. 8 ರಲ್ಲಿ ಆಡಿಸಲಾಯಿತು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮ್ಯಾಚ್-ಅಪ್ಗಳಿಗೆ (match-ups) ಐಪಿಎಲ್ ಒಳ್ಳೆಯದು ಎಂದು ಭಾವಿಸುತ್ತೇನೆ. ಆದರೆ, 14 ಪಂದ್ಯಗಳನ್ನು ಆಡಲಿರುವ ಕಾರಣ ನೀವು ತಂಡವನ್ನು ಬದಲಾಯಿಸಬೇಕು. ಆದರೆ ಅಂತಹ ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಹೆಚ್ಚು ಸ್ಥಿರವಾಗಿರಿಸಿಕೊಂಡರೆ ಅದು ಉತ್ತಮವಾಗಿರುತ್ತದೆ. ಎಡಗೈ ಬ್ಯಾಟ್ಸ್ ಮನ್ ಗಳ ವಿರುದ್ಧ ವಾಷಿಂಗ್ಟನ್ ಸುಂದರ್ ಅವರನ್ನು ಬಳಸಬೇಕು ಎಂಬುದನ್ನು ಶೇ. 100 ರಷ್ಟು ಒಪ್ಪುತ್ತೇನೆ. ಅಕ್ಷರ್ ಪಟೇಲ್ ಟಿ-20 ಕ್ರಿಕೆಟ್ ನಲ್ಲಿ ಉಪ ನಾಯಕನಾಗಿದ್ದಾರೆ. ಅವರು ಆಟವನ್ನು ಮರೆಯಬಾರದು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನ ವೀಡಿಯೊದಲ್ಲಿ ಹೇಳಿದ್ದಾರೆ.
2024 ರ ಟಿ 20 ವಿಶ್ವಕಪ್ ಫೈನಲ್ ಪಂದ್ಯವನ್ನು ಆರ್. ಅಶ್ವಿನ್ ನೆನಪಿಸಿಕೊಂಡಿದ್ದಾರೆ. ಅಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಅಕ್ಸರ್ ಪಟೇಲ್ ನಿರ್ಣಾಯಕ 72 ರನ್ ಜೊತೆಯಾಟ ಆಡಿದ್ದರು. ಇದರಿಂದ ಭಾರತವು 176 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಹರಿಣಿಗಳ ವಿರುದ್ಧ ಅಕ್ಸರ್ ಅದೇ ರೀತಿ ಮಾಡಬಹುದಿತ್ತು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.