ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಲಿಟ್ಟನ್ ದಾಸ್, 2026ರ ಟಿ20 ವಿಶ್ವಕಪ್ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವುದರಿಂದ ನುಣುಚಿಕೊಂಡರು ಮತ್ತು ಅದು ಅವರಿಗೆ ಸುರಕ್ಷಿತವಲ್ಲ ಎಂದು ಹೇಳಿದರು. ಪಂದ್ಯಾವಳಿಗೆ ಸುಮಾರು ಎರಡು ವಾರಗಳು ಬಾಕಿ ಇದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆಗಿನ ಬಿಕ್ಕಟ್ಟಿನ ಮಧ್ಯೆ ಬಾಂಗ್ಲಾದೇಶದ ಭಾಗವಹಿಸುವಿಕೆ ಕುರಿತು ಗೊಂದಲ ಉಂಟಾಗಿದೆ. ಆಟಗಾರರ 'ಭದ್ರತೆ'ಯನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಐಸಿಸಿಗೆ ವಿನಂತಿ ಮಾಡಿದೆ. ಆದಾಗ್ಯೂ, ಐಸಿಸಿ ಇದನ್ನು ತಿರಸ್ಕರಿಸಿದ್ದು, ಹಲವಾರು ಸಭೆಗಳು ನಡೆದರೂ ಸಮಸ್ಯೆ ಬಗೆಹರಿದಿಲ್ಲ.
ಮಂಗಳವಾರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಪಂದ್ಯದ ನಂತರ ಲಿಟ್ಟನ್ ಅವರನ್ನು, ಪಂದ್ಯಾವಳಿಯ ಸಮಯದಲ್ಲಿ ಲಭ್ಯವಿರುವ ಪಿಚ್ಗಳು ತಂಡವನ್ನು ಮುಂಬರುವ ವಿಶ್ವಕಪ್ಗೆ ತಯಾರಿ ನಡೆಸಲು ಸಹಾಯ ಮಾಡಿದೆಯೇ ಎಂದು ಕೇಳಲಾಯಿತು. ನಮ್ಮ ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತದೆಯೇ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ ಎಂದರು ಹೇಳಿದರು.
'ನಾವು ವಿಶ್ವಕಪ್ ಆಡುತ್ತೇವೆಯೇ ಎಂದು ನಿಮಗೆ ಖಚಿತವಾಗಿದೆಯೇ? ನನ್ನ ಕಡೆಯಿಂದ, ನಾನು ಅನಿಶ್ಚಿತ; ಎಲ್ಲರೂ ಅನಿಶ್ಚಿತರಾಗಿದ್ದಾರೆ. ಈ ಕ್ಷಣದಲ್ಲಿ ಇಡೀ ಬಾಂಗ್ಲಾದೇಶ ಅನಿಶ್ಚಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಉತ್ತರವಿಲ್ಲ. ನೀವು ಯಾವ ಪ್ರಶ್ನೆಯನ್ನು ಕೇಳಲಿದ್ದೀರಿ ಎಂದು ನನಗೆ ಅರ್ಥವಾಗಿದೆ. ಅದು ನನಗೆ ಸುರಕ್ಷಿತವಲ್ಲ. ಆ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ' ಎಂದು ಲಿಟ್ಟನ್ ಹೇಳಿದರು.
ಇದಕ್ಕೂ ಮೊದಲು, ಬಾಂಗ್ಲಾದೇಶ ಸರ್ಕಾರದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಜನವರಿ 21 ರೊಳಗೆ ಪಂದ್ಯಾವಳಿಯಲ್ಲಿ ತಾವು ಭಾಗವಹಿಸುವ ಕುರಿತು ನಿರ್ಧರಿಸಲು ಐಸಿಸಿ ಬಿಸಿಬಿಗೆ ಅಂತಿಮ ಸೂಚನೆ ನೀಡಿದ್ದರೂ, ಯಾವುದೇ ಷರತ್ತಿನಡಿಯಲ್ಲಿ ರಾಷ್ಟ್ರೀಯ ತಂಡವು ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪುನರುಚ್ಚರಿಸಿದರು.
20 ತಂಡಗಳ ಟೂರ್ನಮೆಂಟ್ಗಾಗಿ ಬಿಸಿಬಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ದೃಢವಾಗಿ ಹೇಳಿದರೆ, ಸದ್ಯದ ಶ್ರೇಯಾಂಕದ ಪ್ರಕಾರ, ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡುವ ಸಾಧ್ಯತೆಯಿದೆ.
'ನಮ್ಮ ಸ್ಥಾನದಲ್ಲಿ ಸ್ಕಾಟ್ಲೆಂಡ್ ಸೇರ್ಪಡೆಯಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ಐಸಿಸಿ ಭಾರತೀಯ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ಮಣಿದು ಅಸಮಂಜಸ ಷರತ್ತುಗಳನ್ನು ವಿಧಿಸುವ ಮೂಲಕ ನಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೆ, ನಾವು ಆ ಷರತ್ತುಗಳನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ನಜ್ರುಲ್ ಸುದ್ದಿಗಾರರಿಗೆ ತಿಳಿಸಿದರು.
'ಈ ಹಿಂದೆ, ಪಾಕಿಸ್ತಾನವು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಕ್ಕೆ ಐಸಿಸಿ ಸ್ಥಳವನ್ನು ಬದಲಾಯಿಸಿದ ಉದಾಹರಣೆಗಳಿವೆ. ನಾವು ತಾರ್ಕಿಕ ಆಧಾರದ ಮೇಲೆ ಸ್ಥಳವನ್ನು ಬದಲಾಯಿಸಲು ಕೇಳಿದ್ದೇವೆ ಮತ್ತು ತರ್ಕಬದ್ಧವಲ್ಲದ ಒತ್ತಡದಿಂದ ಭಾರತದಲ್ಲಿ ಆಡಲು ನಮ್ಮನ್ನು ಒತ್ತಾಯಿಸಲು ಸಾಧ್ಯವಿಲ್ಲ' ಎಂದು ಹೇಳಿದರು.