ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ರನ್ಔಟ್ ಆದ ಘಟನೆ ಪಂದ್ಯದ ಪ್ರಮುಖ ಚರ್ಚೆಯಾಗಿ ಪರಿಣಮಿಸಿದೆ.
ಈ ವೇಳೆ ನಾನ್ಸ್ಟ್ರೈಕರ್ ತುದಿಯಲ್ಲಿದ್ದ ಅಭಿಷೇಕ್ ಶರ್ಮಾ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಒತ್ತಡದಲ್ಲಿದ್ದ ವೇಳೆ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ತಪ್ಪು ಸಂವಹನದಿಂದ ರನ್ಔಟ್ ಸಂಭವಿಸಿತು. ಕ್ರೀಸ್ಗೆ ಮರಳುವಷ್ಟರಲ್ಲಿ ಇಶಾನ್ ಕಿಶನ್ ಔಟಾಗಿದ್ದು, ಭಾರತದ ಇನ್ನಿಂಗ್ಸ್ಗೆ ಆರಂಭಿಕ ಹಿನ್ನಡೆಯಾಯಿತು.
ಘಟನೆ ನಡೆದ ತಕ್ಷಣ ಅಭಿಷೇಕ್ ಶರ್ಮಾ ನಿರಾಸೆಯಿಂದ ತಲೆಗೆ ಕೈ ಹಾಕಿಕೊಂಡು ಪ್ರತಿಕ್ರಿಯಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಏನೋ ಮಾಡ್ತಾ ಇದ್ಯಾ?
ಇನ್ನು ಈ ರನೌಟ್ ಸಂದರ್ಭದಲ್ಲಿ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ಸಂಭಾಷಣೆ ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಅಭಿಶಷೇಕ್ ಕ್ರೀಸ್ ಮುಟ್ಟಿದ್ಯಾ ಇಲ್ವಾ? ಎಂದು ಕೇಳಿದರೆ, ಅದಕ್ಕೆ ಉತ್ತರಿಸಿದ ಇಶಾನ್ ಕಿಶನ್ ನಂಗ್ ಗೊತ್ತಿಲ್ಲಾ ಎಂದರು. ಇದಕ್ಕೆ ತುಂಬಾ ಕ್ಲೋಸ್ ಇತ್ತಾ ಎಂದು ಅಭಿಶೇಕ್ ಕೇಳಿದಾಗ ಇಶಾನ್ ಕಿಶನ್ ಹೌದು ತುಂಬಾ ಕ್ಲೋಸ್ ಇತ್ತು ಎಂದು ಉತ್ತರಿಸಿದ್ದಾರೆ.
ಇದಕ್ಕೆ ಗರಂ ಆದ ಅಭಿಷೇಕ್ ಏನೇ ಮಾಡ್ತಾ ಇದ್ಯಾ.. ಎಂದು ಕೇಳಿದ್ದು, ಇದಕ್ಕೆ ಇಶಾನ್ ಕಿಶನ್ ನಾನೇ ಮುಂದೆ ಇದ್ನಲ್ಲಾ ಹೀಗಾಗಿ ನನ್ ಕಾಲ್ ಆಗಿತ್ತು ಎಂದಿದ್ದಾರೆ. ಇದಕ್ಕೆ ಅಭಿಷೇಕ್.. ಆದ್ರೆ ಅಲ್ಲಿ ಫೀಲ್ಡರ್ ಇದ್ದಾ ಅಲ್ವಾ ಎಂದು ಹೇಳಿದ್ದಾರೆ.
ಗವಾಸ್ಕರ್ ಹೇಳಿದ್ದೇನು?
ಪಂದ್ಯದ ಬಳಿಕ ಈ ರನ್ಔಟ್ ಕುರಿತು ಮಾತನಾಡಿದ ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್, ತಪ್ಪಿನ ಹೊಣೆಯನ್ನು ಅಭಿಷೇಕ್ ಶರ್ಮಾ ಮೇಲೆ ಹೊರಿಸಿದರು.
"ಇದು ಸ್ಪಷ್ಟವಾಗಿ ಸಂವಹನದ ಕೊರತೆಯಿಂದ ನಡೆದ ರನ್ಔಟ್. ಓಟ ಆರಂಭಿಸುವ ನಿರ್ಧಾರ ತೆಗೆದುಕೊಂಡ ಆಟಗಾರನೇ ತನ್ನ ಜೊತೆಯ ಆಟಗಾರನಿಗೆ ಸ್ಪಷ್ಟ ಕರೆ ನೀಡಬೇಕು. ಈ ಸಂದರ್ಭದಲ್ಲಿ ಗೊಂದಲ ಉಂಟಾಗಿದ್ದು, ಅದರ ಪರಿಣಾಮವಾಗಿ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡರು" ಎಂದು ಗವಾಸ್ಕರ್ ವಿಶ್ಲೇಷಿಸಿದ್ದಾರೆ.
ಇನ್ನು ಆರಂಭಿಕ ಆಘಾತದ ನಡುವೆಯೂ ಭಾರತ ಚೇತರಿಸಿಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಅರ್ಧಶತಕ ಸಿಡಿಸಿದರೆ, ಅಭಿಷೇಕ್ ಶರ್ಮಾ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು.
ಅಂತಿಮ ಹಂತದಲ್ಲಿ ಶಿವಂ ದುಬೆ ವೇಗವಾಗಿ ರನ್ಗಳಿಸಿ ತಂಡದ ಮೊತ್ತವನ್ನು ಮತ್ತಷ್ಟು ಬಲಪಡಿಸಿದರು. ಅಂತಿಮವಾಗಿ ಭಾರತ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು.