ಐಪಿಎಲ್ ಜಗತ್ತಿನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಬಗ್ಗೆಯೇ ವ್ಯಾಪಕ ವದಂತಿಗಳು ಹರಡುತ್ತಿವೆ. ಐಪಿಎಲ್ 2027ಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಅವರನ್ನು ವಿನಿಮಯ ಮಾಡಿಕೊಳ್ಳಲು ನೋಡುತ್ತಿದೆ ಎಂದು ವರದಿಯಾಗಿದೆ. ಗುಜರಾತ್ ಟೈಟಾನ್ಸ್ (GT) ತಂಡದಿಂದ ಬಂದ ನಂತರ ಅವರು ಕಳೆದ ಮೂರು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಪಾಂಡ್ಯ ಅವರನ್ನು ಪಡೆಯಲು 7 ಫ್ರಾಂಚೈಸಿಗಳು ಆಸಕ್ತಿ ವ್ಯಕ್ತಪಡಿಸಿದ್ದರೆ, ಆರ್ಸಿಬಿ ಮತ್ತು ಎಸ್ಆರ್ಎಚ್ ತಂಡಗಳು ಸ್ಪರ್ಧೆಯಿಂದ ಹೊರಗುಳಿದವೆ ಎನ್ನಲಾಗಿದೆ. ಭಾರತದ ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ, ಮತ್ತೆ ಹಾರ್ದಿಕ್ ಪಾಂಡ್ಯ ಅವರನ್ನು ಸೇರಿಸಿಕೊಳ್ಳುವ ಮನಸ್ಥಿತಿಯು ಗುಜರಾತ್ ಟೈಟಾನ್ಸ್ ತಂಡಕ್ಕೆ ಇಲ್ಲದಿರಬಹುದು ಎಂದಿದ್ದಾರೆ.
GT ಬಳಿ MIಗೆ ನೀಡಲು ಹೆಚ್ಚಿನದೇನೂ ಇಲ್ಲ
ವಾಸ್ತವವಾಗಿ, ಮುಂಬೈ ಇಂಡಿಯನ್ಸ್ ಜೊತೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆದರೆ, ಅವರಿಗೆ ಬಿಟ್ಟುಕೊಡಲು ಸೂಕ್ತ ಆಟಗಾರರು ಇಲ್ಲದಿರುವುದರಿಂದ, ಹಾರ್ದಿಕ್ ಪಾಂಡ್ಯ ಅವರನ್ನು ಪಡೆಯಲು ಆರ್ಸಿಬಿ ಮತ್ತು ಎಸ್ಆರ್ಎಚ್ ನಿರಾಕರಿಸಿರಬಹುದು ಎಂದು ಅವರು ಅಭಿಪ್ರಾಯಪಟ್ಟರು. 'ಎಲ್ಲ ತಂಡಗಳು ಆಸಕ್ತಿ ಹೊಂದಿವೆ ಎಂದು ತೋರುತ್ತದೆ ಅಥವಾ ಅಂತಹ ವದಂತಿಗಳು ಹರಡುತ್ತಿವೆ. ಕೇವಲ ಎರಡು ತಂಡಗಳಾದ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಮಾತ್ರ ಅವರನ್ನು ಬಯಸುವುದಿಲ್ಲ. ಗುಜರಾತ್ ಟೈಟಾನ್ಸ್ ಸೇರಿದಂತೆ ಉಳಿದವರೆಲ್ಲರೂ ಆಸಕ್ತಿ ಹೊಂದಿದ್ದಾರೆಂದು ಕೇಳಿಬಂದಿದೆ. ಗುಜರಾತ್ ಟೈಟಾನ್ಸ್ ಆಸಕ್ತಿ ಹೊಂದಿದೆಯೇ ಎಂಬ ಅನುಮಾನ ನನಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಆ ಏಳು ತಂಡಗಳು ಮುಂಬೈಗೆ ಏನು ನೀಡಬಹುದು?' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಜಿಟಿಗೆ ಹೋಗಲ್ಲ
ಶುಭಮನ್ ಗಿಲ್ ನೇತೃತ್ವದ ತಂಡವು ಕಳೆದ ಎರಡು ವರ್ಷಗಳಿಂದ ಐಪಿಎಲ್ನಲ್ಲಿ ಅತ್ಯಂತ ಸಮತೋಲಿತ ತಂಡಗಳಲ್ಲಿ ಒಂದಾಗಿದೆ. ಇಲ್ಲಿ ತಂಡದ ಯಶಸ್ಸಿನಲ್ಲಿ ಬೌಲರ್ಗಳು ಮತ್ತು ಬ್ಯಾಟರ್ಗಳು ಸಮಾನ ಕೊಡುಗೆಯನ್ನು ನೀಡುತ್ತಾರೆ. ಗಿಲ್ ಮತ್ತು ಸಾಯಿ ಸುದರ್ಶನ್ ಅತ್ಯಂತ ಪ್ರಬಲವಾದ ಜೋಡಿಯನ್ನು ಹೊಂದಿದ್ದರೆ, ಮೂರನೇ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಇದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ರಶೀದ್ ಖಾನ್ ಮತ್ತು ಕಗಿಸೊ ರಬಾಡಾ ಅವರಂತಹ ಬೌಲರ್ಗಳಿದ್ದು, ಇವರು ಹೆಚ್ಚಿನ ಸಂಖ್ಯೆಯಲ್ಲಿ ವಿಕೆಟ್ಗಳನ್ನು ಕಬಳಿಸುತ್ತಾರೆ.
'ಗುಜರಾತ್ ಯಾರನ್ನು ಬಿಟ್ಟುಕೊಡಬಲ್ಲದು? ಈ ವಿನಿಮಯದಲ್ಲಿ ಅವರಿಗೆ ಆಸಕ್ತಿ ಇರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ; ಮುಂಬೈ ತಂಡವು ರಶೀದ್ಗಾಗಿ ಕೇಳಬಹುದು, ಆದರೆ ಅದು ಅನುಮಾನಾಸ್ಪದ. ನೀವು ಕಗಿಸೊ ರಬಾಡಾ ಅವರನ್ನೂ ಕೇಳಬಹುದು, ಆದರೆ, 'ಪರ್ಪಲ್ ಕ್ಯಾಪ್' ಗೆದ್ದ ಆಟಗಾರನನ್ನು ಅವರು ಏಕೆ ಬಿಟ್ಟುಕೊಡುತ್ತಾರೆ? ಏನೇ ಆದರೂ, ಇದು ನಡೆಯುವ ಸಾಧ್ಯತೆಯಿಲ್ಲ ಎಂದೇ ನನಗೆ ಅನ್ನಿಸುತ್ತದೆ. ಏಕೆಂದರೆ, ಅವರು ಗುಜರಾತ್ ಟೈಟಾನ್ಸ್ನಿಂದಲೇ ಹೊರ ಹೋದವರು. ಅವರನ್ನು ಮತ್ತೆ ಏಕೆ ಆರಿಸಿಕೊಳ್ಳಬೇಕು? ಶುಭಮನ್ ಗಿಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ, ತಂಡದಲ್ಲಿ ಇಬ್ಬರು ಪ್ರಬಲ ನಾಯಕರನ್ನು (ಆಲ್ಫಾಗಳನ್ನು) ಏಕೆ ಒಗ್ಗೂಡಿಸಬೇಕು?' ಎಂದು ಚೋಪ್ರಾ ಹೇಳಿದರು.