ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡ ಪ್ರಕಟವಾಗಿದ್ದು, ಈ ಹಿಂದಿನ ನಾಯಕ ಸೂರ್ಯಕುಮಾರ್ ಯಾದವ್ ಗೆ ಎರಡೂ ಸರಣಿಗಳಿಂದ ಕೋಕ್ ನೀಡಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳಿಗಾಗಿ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತದ ತಂಡವನ್ನು ಪ್ರಕಟಿಸಿದೆ.
ಈ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ಹಾಗೂ ತಿಲಕ್ ವರ್ಮಾ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ.
ಇದು ಶ್ರೇಯಸ್ ಅಯ್ಯರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಈ ತಂಡದ ಆಯ್ಕೆಯಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವ ಸಂಗತಿ ಎಂದರೆ, ಐಪಿಎಲ್ 2026ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ದೊರೆತಿರುವುದು.
ಐಪಿಎಲ್ನಲ್ಲಿ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ, ಪ್ರಿನ್ಸ್ ಯಾದವ್ ಹಾಗೂ ಹರ್ಷಿತ್ ರಾಣಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದರ ಜೊತೆಗೆ ಅನುಭವಿ ಆಟಗಾರರಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ಟಿ20 ಅಧ್ಯಾಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡದಲ್ಲಿ ಯುವ ಪ್ರತಿಭೆ ಮತ್ತು ಅನುಭವಿಗಳ ಸಮತೋಲನ ಸಾಧಿಸಲು ಆಯ್ಕೆ ಸಮಿತಿ ಪ್ರಯತ್ನಿಸಿದೆ.
ಉತ್ತಮ ಫಾರ್ಮ್ನಲ್ಲಿರುವ ಹಲವು ಆಟಗಾರರಿಗೆ ಅವಕಾಶ ನೀಡಿರುವ ಆಯ್ಕೆದಾರರು, ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿಕೊಳ್ಳುವ ಅವಕಾಶವನ್ನು ನೀಡಿದ್ದಾರೆ.
ಸೂರ್ಯಕುಮಾರ್ ಗೆ ಶಾಕ್
ಆದರೆ, ಈ ತಂಡದ ಆಯ್ಕೆಯಲ್ಲಿ ಅತಿದೊಡ್ಡ ಚರ್ಚೆಗೆ ಕಾರಣವಾಗಿರುವುದು ಸೂರ್ಯಕುಮಾರ್ ಯಾದವ್ ಅವರ ಗೈರುಹಾಜರಿಯಾಗಿದೆ. ಸ್ಟಾರ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ಮಾತ್ರವಲ್ಲದೆ, ಸಂಪೂರ್ಣವಾಗಿ ತಂಡದಿಂದಲೇ ಕೈಬಿಡಲಾಗಿದೆ.
ಬಿಸಿಸಿಐ ಪ್ರಕಟಿಸಿರುವ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡಿದ್ದು, ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ. ಜೊತೆಗೆ ವೈಭವ್ ಸೂರ್ಯವಂಶಿ ಮತ್ತು ಪ್ರಿನ್ಸ್ ಯಾದವ್ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಕದಿನ: ಕೊಹ್ಲಿಗೆ ವಿಶ್ರಾಂತಿ ಜೈಸ್ವಾಲ್ ಪರ್ಯಾಯ
ಇನ್ನು ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದು ಗಾಯದ ಸಮಸ್ಯೆಯಿಂದಾಗಿ ಕೊಹ್ಲಿ 2 ವಾರಗಳ ತಂಡದಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಕೊಹ್ಲಿ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಗೆ ಅವಕಾಶ ನೀಡಲಾಗಿದೆ.