ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟೀದಾರ್ ಫ್ರಾಂಚೈಸಿಗಾಗಿ 2025ರಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ಮೊದಲ ನಾಯಕ ಮಾತ್ರವಲ್ಲ, ಐಪಿಎಲ್ 2026ರ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಪ್ರಶಸ್ತಿಗೆ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಮೊದಲು ಆರ್ಸಿಬಿಗೆ ಸೇರಿದ ಪಾಟೀದಾರ್ ಅವರಿಗೆ ಇದೊಂದು ರೋಮಾಂಚನಕಾರಿ ಪ್ರಯಾಣವಾಗಿದೆ. 2022ರಲ್ಲಿ ಹರಾಜಿನಲ್ಲಿ ಪಾಟೀದಾರ್ ಯಾವೊಂದು ತಂಡಕ್ಕೂ ಬಿಕರಿಯಾಗಿರಲಿಲ್ಲ. ಆದರೆ, 2022ರಲ್ಲಿ ಬದಲಿ ಆಟಗಾರನಾಗಿ ಮತ್ತೆ ಆರ್ಸಿಬಿಗೆ ಮರಳಿದರು. ಆದರೆ, ಆ ಸಮಯದಲ್ಲಿ ಮತ್ತೆ ಆರ್ಸಿಬಿಗೆ ಮರಳಲು ಪಾಟೀದಾರ್ ಅವರಿಗೆ ಇಷ್ಟವಿರಲಿಲ್ಲ ಮತ್ತು ಆ ಅವಧಿಯಲ್ಲಿ ಅವರ ಮದುವೆ ಸಹ ನಿಗದಿಯಾಗಿತ್ತು ಎಂದು ಬಹಿರಂಗಪಡಿಸಿದರು.
'ನಾನು ಆರ್ಸಿಬಿ ತಂಡವನ್ನು ಸೇರಲು ಎಂದಿಗೂ ಬಯಸಿರಲಿಲ್ಲ ಎಂಬುದು ನಿಜ. ಅವರು ನನ್ನನ್ನು ಬದಲಿ ಆಟಗಾರನಾಗಿ ತಂಡಕ್ಕೆ ಕರೆಯುತ್ತಿದ್ದಾರೆ ಎಂದು ನನಗೆ ಸ್ವಲ್ಪ ಹಿಂಜರಿಕೆ ಇತ್ತು. ಆದ್ದರಿಂದ, ಅವರು ಖಂಡಿತವಾಗಿಯೂ ನನಗೆ ಆಡಲು ಅವಕಾಶ ನೀಡುವುದಿಲ್ಲ ಎಂದು ತಿಳಿದಿತ್ತು ಮತ್ತು ನಾನು ಶಿಬಿರಕ್ಕೆ ಸೇರಿದಾಗ ನನಗೆ ಬಂದ ಪ್ರತಿಕ್ರಿಯೆಯೂ ಅದೇ ಆಗಿತ್ತು' ಎಂದು ಪಾಟೀದಾರ್ ಯೂಟ್ಯೂಬ್ನಲ್ಲಿ ರೋಟೋರಿಸ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ನಾವು ನಿಮ್ಮನ್ನು ಬದಲಿ ಆಟಗಾರನಾಗಿ ಕರೆತಂದಿದ್ದೇವೆ. ಆದ್ದರಿಂದ ಆರಾಮವಾಗಿರಿ, ಶಾಂತವಾಗಿರಿ. ಯಾರಾದರೂ ಗಾಯಗೊಂಡರೆ, ಆಗ ಮಾತ್ರ ನಿಮಗೆ ಅವಕಾಶ ಸಿಗುತ್ತದೆ ಅವರು ನನಗೆ ಸ್ಪಷ್ಟವಾಗಿ ಹೇಳಿದ್ದರು' ಎಂದರು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನಿಜವಾಗಿಯೂ ಇಲ್ಲಿಗೆ ಬರಲು ಬಯಸಿರಲಿಲ್ಲ. ನನ್ನ ಮದುವೆಯ ದಿನಾಂಕವನ್ನು ಸಹ ನಿಗದಿಪಡಿಸಲಾಗಿತ್ತು. ಆ ಪರಿಸ್ಥಿತಿಯಲ್ಲಿ ನಾನು ಬಹಳಷ್ಟು ಜನರೊಂದಿಗೆ ಮಾತನಾಡಿದೆ. ನಾನು ಬರಲು ಬಯಸಿರಲಿಲ್ಲ ಏಕೆಂದರೆ, ನಾನು ಒಳಗೆ ಬಂದು ಇಡೀ ಸಮಯ ಬೆಂಚ್ ಮೇಲೆ ಕೂರುರುವುದನ್ನು ನಾನು ಸಹಿಸಲು ಸಾಧ್ಯವಿರಲಿಲ್ಲ' ಎಂದು ಅವರು ಹೇಳಿದರು.
ಐಪಿಎಲ್ 2021ರ ಮಿನಿ-ಹರಾಜಿನಲ್ಲಿ ಆರ್ಸಿಬಿ ₹20 ಲಕ್ಷಕ್ಕೆ ಖರೀದಿಸಿದ ನಂತರ, ಪಾಟೀದಾರ್ ಅವರಿಗೆ ಆ ಆವೃತ್ತಿ ಉತ್ತಮವಾಗಿರಲಿಲ್ಲ. ನಾಲ್ಕು ಪಂದ್ಯಗಳಲ್ಲಿ 114ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 71 ರನ್ಗಳನ್ನು ಮಾತ್ರ ಗಳಿಸಿದರು. ಬಳಿಕ ಆರ್ಸಿಬಿ ಅವರನ್ನು ಬಿಡುಗಡೆ ಮಾಡಿತು.
ಆಗ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಪಾಟೀದಾರ್ ಅವರನ್ನು ಖರೀದಿಸಲು ಯಾರೊಬ್ಬರೂ ಆಸಕ್ತಿ ತೋರಿಸಲಿಲ್ಲ. ನಂತರ ಆರ್ಸಿಬಿ ಅವರನ್ನು ಆವೃತ್ತಿಯ ಮಧ್ಯದಲ್ಲಿ ಲವ್ನಿತ್ ಸಿಸೋಡಿಯಾ ಬದಲಿಗೆ ಆಯ್ಕೆ ಮಾಡಿತು. ಈ ಬಾರಿ, ಪಾಟೀದಾರ್ ತಮ್ಮ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು ಮತ್ತು ಆ ಆವೃತ್ತಿಯ ಎಲಿಮಿನೇಟರ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಅಜೇಯ 112 ರನ್ಗಳೊಂದಿಗೆ ಎಲ್ಲರ ಗಮನ ಸೆಳೆದರು.
ಉಳಿದದ್ದು, ಅವರು ಹೇಳಿದಂತೆ, ಇತಿಹಾಸ. ಐಪಿಎಲ್ 2025ರ ಮೆಗಾ ಹರಾಜಿನ ನಂತರ ನಾಯಕತ್ವಕ್ಕೆ ಬಡ್ತಿ ಪಡೆದ ಪಾಟೀದಾರ್, ಫ್ರಾಂಚೈಸಿಗೆ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲ ನಾಯಕರಾದರು ಮತ್ತು ಈಗ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ತಂಡವನ್ನು ಮುನ್ನಡೆಸುತ್ತಿದ್ದಾರೆ.