ಐರ್ಲೆಂಡ್ ವಿರುದ್ಧದ ಮುಂಬರುವ ಟಿ20ಐ ಸರಣಿಗೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿರುವಾಗ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬಿಸಿಸಿಐಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಇತ್ತೀಚೆಗೆ, ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತು. ಐಪಿಎಲ್ 2026ರ ಫೈನಲ್ ಪಂದ್ಯದ ಕೇವಲ ಆರು ದಿನಗಳ ನಂತರ ಈ ಸರಣಿ ನಡೆಯಿತು. ಹೀಗಾಗಿ, ಹಿರಿಯ ಆಟಗಾರರಿಗೆ ಕನಿಷ್ಠ ಒಂದು ತಿಂಗಳ ವಿಶ್ರಾಂತಿ ನೀಡಬೇಕು. ಇದು ಅವರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಗವಾಸ್ಕರ್ ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ.
ಬಿಸಿಸಿಐ ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಪಂದ್ಯಗಳನ್ನು ನಿಗದಿಪಡಿಸುವ ಮೂಲಕ ಅವುಗಳನ್ನು ಬೆಂಬಲಿಸುತ್ತಿದೆ. ಆದರೆ, ಆಗಾಗ್ಗೆ ತಂಡ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್, ಪ್ರತಿ ಸರಣಿಯಲ್ಲಿ ಆಟಗಾರರನ್ನು ಬದಲಾಯಿಸುವುದರಿಂದ ಭಾರತೀಯ ಕ್ಯಾಪ್ನ ಮೌಲ್ಯ 'ಅಗ್ಗವಾಗುತ್ತಿದೆ' ಎಂದು ಅವರು ಹೇಳಿದರು.
'ಹೌದು, ಬಿಸಿಸಿಐ ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಶ್ರೀಲಂಕಾದಂತಹ ದೇಶಗಳಿಗೆ ಅಣ್ಣನಂತೆ ಮತ್ತು ಈ ದೇಶಗಳಿಗೆ ಪ್ರವಾಸ ಮಾಡುವ ಮೂಲಕ ಅವರು ಮೈದಾನದಲ್ಲಿ ಬೆಳೆಯಲು ಮತ್ತು ಅವರ ಆರ್ಥಿಕ ವೃದ್ಧಿಗೆ ಸಹಾಯ ಮಾಡಲು ಯಾವಾಗಲೂ ಪ್ರಯತ್ನಿಸಿದೆ. ಆದಾಗ್ಯೂ, ನಮ್ಮ ಕ್ರಿಕೆಟಿಗರ ಆರೋಗ್ಯ ಮತ್ತು ಫಿಟ್ನೆಸ್ ಕೂಡ ನಿರ್ಣಾಯಕವಾಗಿದೆ. ವರ್ಷದಲ್ಲಿ ನಮ್ಮ ಆಟಗಾರರಿಗೆ ಸ್ಪಷ್ಟವಾದ ಒಂದು ತಿಂಗಳ ವಿಶ್ರಾಂತಿ ಇರಬೇಕು. ಭಾರತದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದ್ದರಿಂದ, ಆಗಾಗ್ಗೆ ಕೆಲವರಿಗೆ ವಿಶ್ರಾಂತಿ ನೀಡಿ ಇತರರನ್ನು ಕರೆತರಬಹುದು. ಆದಾಗ್ಯೂ, ಈ ಪದ್ಧತಿಯು ಭಾರತದ ರಾಷ್ಟ್ರೀಯ ತಂಡದ ಕ್ಯಾಪ್ ಅನ್ನು ಕಡಿಮೆ ಮೌಲ್ಯಯುತವಾಗಿಸುತ್ತದೆ. ಏಕೆಂದರೆ ಆಟಗಾರರನ್ನು ಅರ್ಹತೆಯ ಮೇಲೆ ಆಯ್ಕೆ ಮಾಡುವ ಬದಲು ವಿಶ್ರಾಂತಿ ಪಡೆದ ಆಟಗಾರರಿಗೆ ಬದಲಿಯಾಗಿ ಮಾತ್ರ ಆಯ್ಕೆ ಮಾಡಲಾಗುತ್ತಿದೆ' ಎಂದು ಗವಾಸ್ಕರ್ ಮಿಡ್-ಡೇಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
'ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿದರು ಮತ್ತು ಚೊಚ್ಚಲ ಪಂದ್ಯದಲ್ಲೇ ಮಾನವ್ ಸುತಾರ್ ಅದ್ಭುತ ಪ್ರದರ್ಶನ ನೀಡಿದರು. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಯಿತು. ಆದರೆ, ಆ ಎದುರಾಳಿಯ ವಿರುದ್ಧ ಐದು ವಿಕೆಟ್ ಅಥವಾ ಹತ್ತು ವಿಕೆಟ್ ಪಡೆದು ಸಾಧಿಸಲು ಅವರು ಇಷ್ಟಪಡುತ್ತಿರಲಿಲ್ಲವೇ?. ಗಾಯಗಳಾಗದ ಹೊರತು, ಭಾರತ ಆಡುವಾಗಲೆಲ್ಲ ಅತ್ಯುತ್ತಮ ತಂಡ ಆಡಲೇಬೇಕು. ಆದರೆ, ಕೆಲಸದ ಹೊರೆಯಿಂದಾಗಿ ಈ ವಿಶ್ರಾಂತಿಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಭಾರತವು ಬಹುತೇಕ ಪ್ರತಿ ತಿಂಗಳು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದರಿಂದ, ಕೆಲಸದ ಹೊರೆಯಿಂದಾಗಿ ಆಗಾಗ್ಗೆ ವಿಶ್ರಾಂತಿ ಪಡೆಯುವುದನ್ನು ಕಡಿಮೆ ಮಾಡಬೇಕು' ಎಂದು ಅವರು ಹೇಳಿದರು.
ಲಕ್ನೋ ಮತ್ತು ಚೆನ್ನೈನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳು ಅರ್ಧ ಖಾಲಿ ಕ್ರೀಡಾಂಗಣಗಳಿಗೆ ಸಾಕ್ಷಿಯಾದವು. ಭಾರತದ ವೇಳಾಪಟ್ಟಿಯಲ್ಲಿ ಸಾಕಷ್ಟು ವಿರಾಮಗಳಿಲ್ಲದ ಕಾರಣ ಅಭಿಮಾನಿಗಳು ದಣಿದಿದ್ದಾರೆ ಮತ್ತು ಆಸಕ್ತಿ ಕಡಿಮೆ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದರು.
'ಹೌದು, ಯುವ ಆಟಗಾರರಿಗೆ ಅವಕಾಶ ಮತ್ತು ಅನುಭವ ಸಿಗುವಂತೆ 'ಎ' ತಂಡ ಮತ್ತು ಅಂಡರ್-19 ಪಂದ್ಯಗಳನ್ನು ಹೊಂದಿರುವುದು ಒಳ್ಳೆಯದು. ಆದರೆ, ದಯವಿಟ್ಟು ರಾಷ್ಟ್ರೀಯ ಆಟಗಾರರನ್ನು ಉಳಿಸಿ ಮತ್ತು ಅವರಿಗೆ ಒಂದು ತಂಡವಾಗಿ ಒಟ್ಟಿಗೆ ಸರಿಯಾದ ವಿಶ್ರಾಂತಿ ನೀಡಬೇಕು. ಪ್ರತಿಯೊಬ್ಬ ಉನ್ನತ ಆಟಗಾರನಿಗೆ ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾದರೂ ಪೂರ್ಣ ವಿರಾಮ ಸಿಗಬೇಕು' ಎಂದು ಗವಾಸ್ಕರ್ ಬರೆದಿದ್ದಾರೆ.
'ಈ ವರ್ಷದ ವೇಳಾಪಟ್ಟಿ ಈಗಾಗಲೇ ಮುಗಿದಿದೆ ಮತ್ತು ಏನನ್ನೂ ಬದಲಾಯಿಸಲು ಆಗುವುದಿಲ್ಲ. ಆದರೆ, ಮುಂದಿನ ವರ್ಷದ ಆರಂಭದಲ್ಲಿ ಐಪಿಎಲ್ ಪ್ರಾರಂಭವಾಗಿ ಕೊನೆಗೊಳ್ಳುವ ಚಿಂತನೆ ಇರುವುದರಿಂದ, ದಯವಿಟ್ಟು ಆಟಗಾರರಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ವಿಶ್ರಾಂತಿ ನೀಡಿ' ಎಂದು ಅವರು ಹೇಳಿದರು.