ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯಕ್ಕೆ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟು, ತಪ್ಪು ಮಾಡಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸೂರ್ಯಕುಮಾರ್, ತಮ್ಮ ನಿರ್ಧಾರದಿಂದ ಅಕ್ಷರ್ ಪಟೇಲ್ ತುಂಬಾ ಅಸಮಾಧಾನಗೊಂಡಿದ್ದರು. ಪಂದ್ಯದ ನಂತರ ವೈಯಕ್ತಿಕವಾಗಿ ಅವರ ಬಳಿ ಕ್ಷಮೆಯಾಚಿಸಿದ್ದಾಗಿ ತಿಳಿಸಿದರು.
ಭಾರತ ಹರಿಣಿಗಳಿಂದ ಭಾರೀ ಸೋಲನ್ನು ಅನುಭವಿಸಿದ ಕಾರಣದಿಂದ ಸೂರ್ಯ ಕುಮಾರ್ ಯಾದವ್ ಅವರ ನಿರ್ಧಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಟೂರ್ನಿಯಲ್ಲಿ ಟೀಂ ಇಂಡಿಯಾದ ಏಕೈಕ ಸೋಲು ಅದು. ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ನೆದರ್ಲೆಂಡ್ಸ್ ವಿರುದ್ಧದ ಅಂತಿಮ ಲೀಗ್ ಹಂತದ ಪಂದ್ಯದಿಂದ ಹೊರಗುಳಿದಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿತ್ತು. ಆದರೆ ಪಂದ್ಯ ಸೋತು ನಂತರ ಅಕ್ಸರ್ ಪಟೇಲ್ ಅವರನ್ನು ತಂಡಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸೂರ್ಯ ಕುಮಾರ್ ಯಾದವ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿತ್ತು.
ಈ ಕುರಿತು ಮಾತನಾಡಿದ ಸೂರ್ಯ ಕುಮಾರ್ ಯಾದವ್, ಅಕ್ಷರ್ ಪಟೇಲ್ ತುಂಬಾ ಕೋಪಗೊಂಡಿದ್ದರು. ಹರಿಣಿಗಳ ವಿರುದ್ಧದ ಪಂದ್ಯದಲ್ಲಿ ಅವರು ಇರಬೇಕಿತ್ತು. ಅವರು ಅನುಭವಿ ಆಟಗಾರ, ಫ್ರಾಂಚೈಸಿಯೊಂದರ ನಾಯಕರಾಗಿದ್ದಾರೆ. ಪಂದ್ಯದ ಬಳಿಕ ನಾನು ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಎಂದು ಅಕ್ಷರ್ ಪಟೇಲ್ ಗೆ ಹೇಳಿದೆ. ಆದರೆ ಇದು ತಂಡದ ನಿರ್ಧಾರವಾಗಿತ್ತು. ಇದರ ಬಗ್ಗೆ ತುಂಬಾ ಚರ್ಚೆಯಾಯಿತು. ಇದರ ಬಗ್ಗೆ ಮಾರನೇ ದಿನ ಮಾತನಾಡಿದ್ದೇವು ಎಂದು ತಿಳಿಸಿದರು.
ಈ ಮಧ್ಯೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಗೆದ್ದ ಬಳಿಕ ಅಕ್ಷರ್ ಪಟೇಲ್ ಮಾರ್ಮಿಕವಾಗಿ ಪೋಸ್ಟ್ ಮಾಡುವ ಮೂಲಕ ಟೀಂ ಇಂಡಿಯಾ ತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.