ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(IPL )ಟೂರ್ನಿಗಳು ಸದ್ಯದಲ್ಲಿ ಆರಂಭ ಆಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಇಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ, ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.
ಸ್ಟ್ಯಾಂಡ್ಗಳು, ಹೋಲ್ಡಿಂಗ್ ಏರಿಯಾ ಮತ್ತಿತರ ಇತರ ಸ್ಥಳಗಳಲ್ಲಿ ಭದ್ರತೆ ಕುರಿತು KSCA, DNA, NDA ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಮಧ್ಯೆ ಟಿಕೆಟ್ ಖರೀದಿ ಸಂದರ್ಭದಲ್ಲಿ ವಂಚನೆಗಳು ನಡೆಯುವ ಸಾಧ್ಯತೆಯಿದ್ದು, ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ ಎಂದು ಈಶಾನ್ಯ ವಿಭಾಗದ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಐಪಿಎಲ್ ನ ಜ್ವರ ಹೆಚ್ಚಾಗಿದೆ. ಅದರೊಂದಿಗೆ ಟಿಕೆಟ್ ಸ್ಕ್ಯಾಮ್ ನ ವಂಚನೆಗಳು ಕೂಡ ಹೆಚ್ಚಾಗುತ್ತಿದೆ. ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ! ಐಪಿಎಲ್ ಟಿಕೆಟ್ ಗಳನ್ನ ಕೇವಲ ಅಧಿಕೃತ ಮೂಲಗಳ ಮುಖೇನ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ನೆನಪಿರಲಿ! ನೀವು ಹಣ ಪಾವತಿಸುವ ಮುನ್ನ ಒಂದೊಮ್ಮೆ ಪರಿಶೀಲಿಸಿ. ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ, ದೂರನ್ನು ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ.