ಸೋಮವಾರ ಗುವಾಹಟಿಯಲ್ಲಿ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿತು. ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 15 ವರ್ಷದ ಈ ಆಟಗಾರ ಕೇವಲ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ಗಳು ಸೇರಿದಂತೆ 52 ರನ್ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 128 ರನ್ಗಳ ಸಾಧಾರಣ ಗುರಿಯನ್ನು 8 ವಿಕೆಟ್ಗಳು ಮತ್ತು ಇನ್ನೂ 7.5 ಓವರ್ಗಳು ಬಾಕಿ ಇರುವಾಗಲೇ ತಲುಪಿತು. ವೈಭವ್ ಅವರ ನಿರ್ಭೀತ ಬ್ಯಾಟಿಂಗ್ ಪ್ರದರ್ಶನವು ಭಾರತದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಅವರನ್ನು ಯೂಟರ್ನ್ ಹೊಡೆಯುವಂತೆ ಪ್ರೇರೇಪಿಸಿತು.
"X"ನಲ್ಲಿ ಪೋಸ್ಟ್ ಮಾಡಿರುವ ಕೈಫ್, 'ಸೂರ್ಯವಂಶಿ ಅವರ ಆರಂಭಿಕ ಪ್ರದರ್ಶನಗಳ ನಂತರ ಅವರ ಬಗ್ಗೆ ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರಂಭದಲ್ಲಿ ಭಾವಿಸಿದ್ದೆ. ಆದಾಗ್ಯೂ, ಬಿಹಾರ ಮೂಲದ ಈ ಬ್ಯಾಟ್ಸ್ಮನ್ ಈಗ ತಮ್ಮ ವೃತ್ತಿಜೀವನದಲ್ಲಿ ಮುಂದಿನ ಹೆಜ್ಜೆ ಇಡಲು ಸಿದ್ಧರಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ' ಎಂದು ಹೇಳಿದರು.
'ಕಳೆದ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ತುಂಬಾ ಬೇಗನೆ ಪ್ರಚಾರ ಪಡೆಯುತ್ತಿದ್ದಾರೆಂದು ನಾನು ಭಾವಿಸಿದ್ದೆ. ಅನುಭವಿ ಕ್ರಿಕೆಟಿಗನಾಗಿ, ಯುವ ಆಟಗಾರರನ್ನು ಫಾಸ್ಟ್ ಟ್ರ್ಯಾಕ್ ಮಾಡುವಲ್ಲಿ ಯಾವುದೇ ಆತುರ ಇರಬಾರದು ಎಂದು ನಾನು ನಂಬುತ್ತೇನೆ. ಆದರೆ, ಒಂದು ವರ್ಷದ ನಂತರ, ಅವರು ಮುಂದಿನ ಹಂತಕ್ಕೆ ಪದವಿ ಪಡೆಯಲು ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. 15 ವರ್ಷದ ಈ ಆಟಗಾರ ಮನರಂಜನೆ ನೀಡಬಹುದು ಮತ್ತು ಪಂದ್ಯ ಗೆಲ್ಲುವ ಇನಿಂಗ್ಸ್ಗಳನ್ನು ಕೂಡ ಆಡಬಹುದು' ಎಂದು ಕೈಫ್ ಬರೆದಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ಅವರ ಪ್ರತಿಭೆಯನ್ನು ಮತ್ತಷ್ಟು ಕೊಂಡಾಡುವಂತೆ ಮಾಡಿತು.
ಐಪಿಎಲ್ ಬಗ್ಗೆ ಮಾತನಾಡಿದ ವೈಭವ್, 'ಇಂದಿನ ಯೋಜನೆ ಪವರ್ಪ್ಲೇನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿತ್ತು. ಆರಂಭದಲ್ಲಿ, ವಿಕೆಟ್ ಸ್ವಲ್ಪ ಸ್ಟಿಕ್ಕಿ ಆಗಿತ್ತು. ಆದರೆ, ಚೆಂಡು ಹಳೆಯದಾಗುತ್ತಿದ್ದಂತೆ, ಅದು ಚೆನ್ನಾಗಿ ಬ್ಯಾಟ್ಗೆ ಬರಲು ಪ್ರಾರಂಭಿಸಿತು' ಎಂದು ಪ್ರಸಾರಕರಿಗೆ ತಿಳಿಸಿದರು.