ಐಪಿಎಲ್ 2026ನೇ ಆವೃತ್ತಿ ಮುಕ್ತಾಯಗೊಂಡ ದಿನದಿಂದಲೂ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತಾದ ಐಪಿಎಲ್ ಟ್ರೇಡ್ ಕುರಿತಾದ ವರದಿಗಳು ಹೊರಹೊಮ್ಮುತ್ತಲೇ ಇವೆ. ಇದೀಗ ಅಚ್ಚರಿಯ ವರದಿಯೊಂದು ಹೊರಬಿದ್ದಿದ್ದು, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ನಾಯಕತ್ವವನ್ನು ತ್ಯಜಿಸಲಿದ್ದು, ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಹಾರ್ದಿಕ್ ಒಳಗೊಂಡ ಟ್ರೇಡ್ ಮಾತುಕತೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ, IPL 2027ನೇ ಆವೃತ್ತಿಗೆ ಹಾರ್ದಿಕ್ ಮುಂಬೈ ಫ್ರಾಂಚೈಸಿಯೊಂದಿಗೆ ಉಳಿಯುವ ಸಾಧ್ಯತೆ ಹೆಚ್ಚಿದೆ. ಆದಾಗ್ಯೂ, ಫ್ರಾಂಚೈಸಿ ನಾಯಕತ್ವ ಬದಲಾವಣೆಗೆ ಸಜ್ಜಾಗಿದೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮುಂಬೈ ಇಂಡಿಯನ್ಸ್ (MI) ಆಡಳಿತ ಮಂಡಳಿಯು ಹೊಸ ನಾಯಕನ ನೇತೃತ್ವದಲ್ಲಿ ಬೇರೆ ದಿಕ್ಕಿನಲ್ಲಿ ಸಾಗಲು ನೋಡುತ್ತಿದೆ.
ಐದು ಐಪಿಎಲ್ ಪ್ರಶಸ್ತಿಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ. ಬದಲಾಗಿ, ಫ್ರಾಂಚೈಸಿಯ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎಂಬ ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಿಲಕ್ ವರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿಕೊಳ್ಳಲು ಮುಂಚೂಣಿಯ ಅಭ್ಯರ್ಥಿಗಳಾಗಿದ್ದು, ವರದಿ ಪ್ರಕಾರ ತಿಲಕ್ ಅವರ ಆಯ್ಕೆ ಅಚ್ಚುಮೆಚ್ಚಿನದಾಗಿದೆ.
ಹಾರ್ದಿಕ್ ಅವರ ಸಂಭಾವ್ಯ ಟ್ರೇಡಿಂಗ್ ವಿಷಯಕ್ಕೆ ಬಂದರೆ, ಮುಂಬೈ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆ ಮಾತುಕತೆ ನಡೆಸಿದೆ ಎಂದು ವರದಿ ಹೇಳುತ್ತದೆ. ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಕೆಕೆಆರ್, ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ವಿನಿಮಯ ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಆದಾಗ್ಯೂ, ಮುಂದಿನ ವರ್ಷ ಗ್ರೀನ್ ಅವರ ಕೆಲಸದ ಹೊರೆಯ ಬಗ್ಗೆ ಅನುಮಾನಗಳಿದ್ದ ಕಾರಣ ಮುಂಬೈಗೆ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಮ್ಮ ಹೊಸ ಮುಖ್ಯ ಕೋಚ್ ಅನ್ನು ನಿಗದಿಪಡಿಸಿದ ನಂತರ ಮುಂಬೈ ಜೊತೆಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
'ಅವರನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಆಶ್ಚರ್ಯಪಡಬೇಡಿ. ಈ ರೀತಿಯಾಗಿ ಆಟಗಾರನೊಂದಿಗೆ ಚರ್ಚೆಗಳು ಸಹ ನಡೆದಿವೆ. ಒಂದು ವ್ಯಾಪಾರ ನಡೆಯಬೇಕಾದರೆ, ಬಹು ವಿಷಯಗಳು ಸರಿಯಾಗಿ ನಡೆಯಬೇಕು. ಆದ್ದರಿಂದ ಅದು ಅಷ್ಟು ಸರಳವಲ್ಲ' ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಕಂಡ ಮೂಲವೊಂದು ತಿಳಿಸಿದೆ.
ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ?
ವರದಿ ಪ್ರಕಾರ, 2026ರ ಕಳಪೆ ಅಭಿಯಾನದ ಹೊರತಾಗಿಯೂ, 35 ವರ್ಷದ ಸೂರ್ಯಕುಮಾರ್ ಯಾದವ್ ಅವರನ್ನು 2027ರ ಐಪಿಎಲ್ಗಾಗಿ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ಸಾಧ್ಯತೆಯಿದೆ.
'ಹೌದು, ಕಳೆದ ವರ್ಷ ಅವರ ಆವೃತ್ತಿ ಚೆನ್ನಾಗಿರಲಿಲ್ಲ, ಆದರೆ ಅದಕ್ಕೂ ಹಿಂದಿನ ಆವೃತ್ತಿ ಬಗ್ಗೆ ಏನು ಹೇಳುವುದು? ಮುಂಬೈ ಒಂದು ಆವೃತ್ತಿಯ ಆಧಾರದ ಮೇಲೆ ಆಟಗಾರನನ್ನು ಕೈಬಿಡುವುದಿಲ್ಲ ಮತ್ತು ಅವರು ಕಾರ್ಯನಿರ್ವಹಿಸುವ ರೀತಿ ಹಾಗಲ್ಲ. ಅವರು 'ಒಂದು ಕುಟುಂಬ' ಎನ್ನುವ ಟ್ಯಾಗ್ನಲ್ಲಿ ಹೆಮ್ಮೆಪಡುತ್ತಾರೆ ಮತ್ತು ಅದರ ಮೇಲೆ ಪ್ರಮಾಣ ಮಾಡುತ್ತಾರೆ' ಎಂದು ಸೂರ್ಯಕುಮಾರ್ ಅವರ ಪರಿಸ್ಥಿತಿಯ ಬಗ್ಗೆ ಮೂಲಗಳು ತಿಳಿಸಿವೆ.
ಮಹೇಲ ಜಯವರ್ಧನೆ ಕೂಡ ಎರಡು ಪ್ಲಸ್-ಒನ್ ಒಪ್ಪಂದಕ್ಕೆ ಸಹಿ ಹಾಕಿರುವ ಮೂಲಕ ಮತ್ತೊಂದು ವರ್ಷ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಮುಂಬೈ ಇಂಡಿಯನ್ಸ್ ತಮ್ಮ ತಂಡದಲ್ಲಿ ಹೆಚ್ಚಿನ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ, ಐಪಿಎಲ್ 2027ನೇ ಆವೃತ್ತಿಯ ನಂತರ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.