ಮೈಸೂರು ಅರಮನೆಯಲ್ಲಿ ಈ ಹಿಂದೆ ನಡೆದಿರುವ ಜಟ್ಟಿ ಕಾಳಗದ ದೃಶ್ಯ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಜಂಬೂಸವಾರಿಗೂ ಮೊದಲು ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನಡೆಯುತ್ತದೆ. ಇಲ್ಲಿ ಒಟ್ಟು ನಾಲ್ಕು ಜನ ಜಟ್ಟಿಗಳು ಇಲ್ಲಿ ಸೆಣಸಾಡುತ್ತಾರೆ. ಇದಕ್ಕಾಗಿ ಸಾಕಷ್ಟು ಸಿದ್ಥತೆಗಳನ್ನು ಮಾಡಿಕೊಂಡಿರುತ್ತಾರೆ. ಇಲ್ಲಿನ ಸೋಲು ಗೆಲುವಿಗಿಂತ ಹೆಚ್ಚಾಗಿ ಜಟ್ಟಿ ಕಾಳಗ ಅನ್ನೋದು ರಾಜನ ಶ್ರೇಯಸ್ಸು ಮತ್ತು ರಾಷ್ಟ್ರದ ಶ್ರೇಯಸ್ಸನ್ನು ಅವಲಂಭಿಸಿರುತ್ತದೆ. ಜಟ್ಟಿಗಳು ಎನ್ನುವವರು ಮೊದಲೇ ಆಯ್ಕೆಯಾಗಿರುತ್ತಾರೆ. ಸುಮಾರು ಒಂದು ತಿಂಗಳಿನಿಂದ ಇವರು ಸಾಕಷ್ಟು ಪೂರ್ವಭಾವಿ ತಯಾರಿ ನಡೆಸಿರುತ್ತಾರೆ. ಇದರ ಜೊತೆಗೆ ಸಾಕಷ್ಟು ಉಪವಾಸ ವ್ರತಗಳನ್ನು 9 ದಿನಗಳಿಂದ ಕೈಗೊಂಡಿರುತ್ತಾರೆ. ಶಕ್ತಿ ಸಾಮರ್ಥ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಅಲ್ಲಿ ಒಂದು ರಾಜ ಮತ್ತು ರಾಷ್ಟ್ರ ಶ್ರೆಯಸ್ಸಿಗಾಗಿ ಸೆಣಸುವುದು ಬಹು ಮುಖ್ಯವಾಗಿರುತ್ತದೆ. ರಾಜನಿಗಾಗಿ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ ಈ ಜಟ್ಟಿಗಳು.
200 ಸೈನಿಕರಿಗೆ ಒಬ್ಬ ಜಟ್ಟಿ ಸಮಾನ ಎನ್ನುವ ನಂಬಿಕೆ ಕೂಡ ಇದೆ. ಪಟ್ಟದ ಕತ್ತಿಗೆ ಶಾಂತಿ ನೀಡುವ ಸಲುವಾಗಿ ಈ ಕಾಳಗ ನಡೆಸಲಾಗುತ್ತದೆ. ಶಕ್ತಿಯನ್ನು ಪ್ರದರ್ಶನ ಮಾಡುವಂತಹ ಸಂಕೇತ. ನಮ್ಮಲ್ಲಿ ಶಕ್ತಿ ಸಾರ್ಮರ್ಥ್ಯ ಉಳ್ಳಂತಹ ಜನರ್ಯಾರು ಇದ್ದಾರೆ, ಅವರನ್ನು ಸಂಗ್ರಹಿಸಿಕೊಂಡು ಅವರ ಮೂಲಕವಾಗಿ ಯುದ್ಧಾಧಿಗಳಲ್ಲಿ ಶತ್ರುಗಳನ್ನು ಧಮನ ಮಾಡಿ ಶಿಷ್ಟರನ್ನು ಸಂರಕ್ಷಣೆ ಮಾಡಬೇಕು ಎಂಬ ಕಾರ್ಯಕ್ಕಾಗಿ ಅನ್ವೇಷಣಾ ರೂಪವಾದಂತಹ ಕಾರ್ಯವೂ ಹೌದು.
ಪುರಾಣ: ಭಾಗವತ ಪುರಾಣದ ಕೃಷ್ಣನ ಕಥೆಯಲ್ಲಿ ಬರುತ್ತದೆ. ಕಂಸ ಇಂತಹ ಜಟ್ಟಿಗಳನ್ನು ಬಹಳವಾಗಿ ಇಟ್ಟುಕೊಂಡಿರುತ್ತಾನೆ. ಚಾಣುರ, ಮುಷ್ಠಿಕಾಚುರ ಎಂಬಂತಹ ಇಬ್ಬರು ಜಟ್ಟಿಗಳು. ಇವರು ಮುಖ್ಯವಾಗಿ ಮುಷ್ಠಿ ಯುದ್ಧವನ್ನು ಮಾಡುತ್ತಿದ್ದವರು. ಈ ಇಬ್ಬರು ಮುಷ್ಠಿಗಳಲ್ಲಿ ಚಾಣುರ ಎಂಬುವವನ್ನು ಕೃಷ್ಣ ಹಾಗೂ ಮುಷ್ಟಿಕಾಚರು ಎಂಬವವನನ್ನು ಬಲರಾಮ ಸೋಲಿಸಿರುತ್ತಾರೆ. ಕೃಷ್ಣ ಯಾದವ ಕುಲದವನಾಗಿದ್ದು, ಹೇಗೆ ಶತ್ರುಗಳ ಸಂಹಾರಮಾಡಿದನು ಎಂಬುದನ್ನು ತೋರಿಸುವ ಸಂಕೇತವಾಗಿ ಈ ಜಟ್ಟಿ ಕಾಳಗವನ್ನು ಯದು ವಂಶದವರು ನಡೆಸುತ್ತಾ ಬಂದಿದ್ದಾರೆ. ಜಟ್ಟಿಗಳು ವಂಶ ಪಾರಂಪರೆಯಾಗಿ ಬಂದಂತವರು. ಪ್ರಸ್ತುತ ಮೈಸೂರಿನಲ್ಲಿ ನಡೆಯುವ ದಸರಾ ಆಚರಣೆಯಲ್ಲಿ ಆಯುಧಗಳಿಗೆ ಬಲಿ ಕೊಡುವ ಕ್ರಿಯೆಗೆ ಮಾತ್ರ ಜಟ್ಟಿ ಕಾಳಗವನ್ನು ಸಾಂಕೇತಿಕವಾಗಿ ಏರ್ಪಡಿಸಲಾಗುತ್ತದೆ.
ಮುಮ್ಮಡಿ ಕೃಷ್ಣಾರಾಜ ಒಡೆಯರ್ ಕಾಲದಲ್ಲಿ ಒಂದು ಘಟನೆ ನಡೆಯುತ್ತೆ. ರಾಜ ಮಹಾರಾಜರಿಗೆ ಬ್ರಿಟಿಷ್ ನವರು ಬಂದಾಗ ಅವರನ್ನ ಮೆಚ್ಚಿಸುವುದು ಬಹಳ ಮುಖ್ಯವಾಗಿರುತ್ತದೆ. ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಮಹಾರಾಜರೊಂದಿಗೆ ಬಂಡೀಪುರಕ್ಕೆ ತೆರಳಿ ಹುಲಿಗಳನ್ನು ನೋಡಿಕೊಂಡು ಬರುತ್ತಾರೆ. ತದ ನಂತರ ಆ ಬ್ರಿಟಿಷನು ರಾಜನಿಗೆ, ಈಗ ಕಂಡಂತಹ ಹುಲಿಯ ಮೇಲೆ ಯುದ್ಧ ಮಾಡುವಂತಹ ಪೈಲ್ವಾನ್ ನಿಮ್ಮಲ್ಲಿ ಇದ್ದಾರಾ ಎಂದು ಪ್ರಶ್ನಿಸುತ್ತಾನೆ. ಆಗ ಮಹಾರಾಜರು ಇದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ, ನಾನು ಅದನ್ನು ನೋಡಬೇಕು, ಕಾಳಗಕ್ಕೆ ವ್ಯವಸ್ಥೆ ಮಾಡಿ ಎಂದು ಹೇಳುತ್ತಾನೆ. ಇದರಿಂದ ಚಿಂತಾಗ್ರಾಂತರಾದ ರಾಜರು ಯೋಚನೆಯಲ್ಲಿದ್ದಾಗ, ಒಬ್ಬ ಪೈಲ್ವಾನ್ ಬಂದು ನಾನು ಹುಲಿಯೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಇದಕ್ಕೆ ಮಣಿದ ರಾಜರು ಕಾಳಗಕ್ಕೆ ವ್ಯವಸ್ಥೆ ಮಾಡುತ್ತಾರೆ. ಈ ಕಾಳಗದಲ್ಲಿ ಆ ಪೈಲ್ವಾನ್ ಹುಲಿಯನ್ನು ಕೊಲ್ಲುತ್ತಾನೆ. ಇದರಿಂದ ಖುಷಿಯಾದ ಮಹಾರಾಜರು ಆ ಜಟ್ಟಿಯನ್ನು ಹೆಗಲ ಮೇಲೆ ಹೊತ್ತು ಆನೆ ಮೇಲೆ ಕೂರಿಸಿ ಮೈಸೂರಿನಲ್ಲಿ ಮೆರವಣಿಗೆ ಮಾಡಿ ಆತನಿಗೆ ಗಂಗಾಧರ ಸುಬ್ಬಾ ಜಿಟ್ಟಪ್ಪ ಎನ್ನುವ ನಾಮಧೇಯ ನೀಡಿದರಂತೆ.
ಒಮ್ಮೆ ಮುಮ್ಮುಡಿ ಕೃಷ್ಣರಾಜ ಒಡೆಯರ್ ಕಾಡಿನಲ್ಲಿ ಹೊರಟಿದ್ದಾಗ ಕರಡಿ ದಾಳಿ ಮಾಡುತ್ತೆ. ಆಗ ರಾಜರಿಗೆ ಬೆಂಗಾವಲಾಗಿದ್ದ ಸದಾನಂದ ಸುಬ್ಬಾ ಜೆಟ್ಟಪ್ಪ ಒಡೆಯರನ್ನು ರಕ್ಷಿಸಿದರಂತೆ. ಇದಾದ ಬಳಿಕ ನಜರ್ ಬಾದ್ ನಲ್ಲಿ ಗರಡಿ ತೆರೆದು ಅಲ್ಲಿ ನೂರಾರು ಯುವಕರಿಗೆ ಕುಸ್ತಿ ಕಲೆಯನ್ನು ಸುಬ್ಬಾ ಜೆಟ್ಟಪ್ಪ ಕಲಿಸಿದರೆಂದು ಹೇಳಲಾಗುತ್ತೆ.
ಆಗಿನಿಂದಲೂ ಮೈಸೂರಿನಲ್ಲಿ ಜಟ್ಟಿಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಾ ಬರಲಾಗಿದೆ. ಅರಮನೆ ಆವರಣದಲ್ಲಿ ಒಡೆಯರ್ ಸಮ್ಮುಖದಲ್ಲಿ ನಡೆಯುವ ಜಟ್ಟಿ ಕಾಳಗಕ್ಕೂ ಮುನ್ನ ಅವರು 9 ದಿನಗಳ ಉಪವಾಸ ವ್ರತ ಕೈಗೊಳ್ಳುತ್ತಾರೆ. ನಂತರ ಜಟ್ಟಿ ಕಾಳಗಕ್ಕೆ ನಡೆಸುತ್ತಾರೆ. ಕಾಳಗದಲ್ಲಿ ವಜ್ರಮುಷ್ಠಿಯ ಏಟು ಈಗಲೂ ಎದುರಾಳಿ ನೆತ್ತಿಯಲ್ಲಿ ನೆತ್ತರು ಚಿಮ್ಮಿಸುತ್ತದೆ. ಮೊದಲು ಯಾರ ನೆತ್ತಿಯಲ್ಲಿ ರಕ್ತ ಸುರಿಯುತ್ತದೇ ಆತ ಸೋತಂತೆ. ಆದರೆ, ಇಲ್ಲಿ ಸೋತ-ಗೆದ್ದ ಇಬ್ಬರಿಗೂ ರಾಜಮನೆತನದಿಂದ ಭಕ್ಷೀಸೂ ದೊರೆಯುತ್ತದೆ.