ಜಿಲ್ಲಾ ಸುದ್ದಿ

ಮೊಬೈಲ್ ಟವರ್ ಏರಿ ಕುಳಿತ ಮಹಿಳೆ

ಹುಬ್ಬಳ್ಳಿ: ಮಗಳ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ದೇಣಿಗೆ ಸಂಗ್ರಹಿಸಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮುಂಬೈನಿಂದ ನಡೆದು ಬಂದಿರುವ ಮಹಿಳೆಯೊಬ್ಬಳು ಶುಕ್ರವಾರ ಭಾನುವಾರ ಹುಬ್ಬಳ್ಳಿ ಅಕ್ಷಯ ಹೋಟೆಲ್ ಮಹಡಿಯ ಮೇಲಿನ ಮೊಬೈಲ್ ಟವರ್ ಹತ್ತಿ ಕುಳಿತು ಕೆಲವು ಗಂಟೆ ಕಾಲ ಜನರನ್ನು ದಿಗಿಲುಗೊಳಿಸಿದಳು.

ಸಪ್ನಾ ಪರೇರಾ ತನ್ನ ಮಗಳ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮುಂಬೈನಿಂದ ಚೆನ್ನೈಗೆ ನಡೆದುಕೊಂಡು ಹೋಗುವುದಾಗಿ ಹೇಳಿಕೊಂಡಿದ್ದಳು. ವೈದ್ಯರು ನೀಡಿರುವ ಪತ್ರವನ್ನು ಜತೆಗಿಟ್ಟುಕೊಂಡು, ದಾರಿ ಮಧ್ಯೆ ಜನರಿಂದ ನೆರವುಯಾಚಿಸುತ್ತಿದ್ದಳು.

ಭಾನುವಾರ ಮಧ್ಯಾಹ್ನ ಈಕೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಹೋಟೆಲ್‌ಗೆ ದಾರಿ ಕೇಳಿಕೊಂಡು, ಮೊಬೈಲ್ ಟವರ್ ಏರಿ ಕುಳಿತಿದ್ದಾಳೆ. ಇದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟವರ್ ಹತ್ತಿ ಕುಳಿತಿದ್ದ ಮಹಿಳೆ 'ಕರ್ನಾಟಕದ ಮುಖ್ಯಮಂತ್ರಿಗಳು ಬಂದು ನೆರವು ಘೋಷಿಸುವವವೆಗೂ ಟವರ್ ಇಳಿಯುವುದಿಲ್ಲ' ಎಂದು ಪಟ್ಟು ಹಿಡಿದಿದ್ದಾಳೆ. ಎರಡು ಗಂಟೆಗೂ ಹೆಚ್ಚು ಕಾಲ ಮಹಿಳೆ ಕಾಡಿದ್ದಾಳೆ.

ಕೊನೆಗೆ ಡಿಸಿಪಿ ಹನುಮಂತರಾಯ ಆದೇಶದ ಮೇರೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಟವರ್ ಹತ್ತಿ ಮಹಿಳೆಯನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT