ಜಿಲ್ಲಾ ಸುದ್ದಿ

ಮತ ಹಾಕದವರಿಗೆ ಶಿಕ್ಷೆ ಇಲ್ಲ: ಎಚ್.ಕೆ.ಪಾಟೀಲ್

ವಿಧಾನಪರಿಷತ್ತು: ಪಂಚಾಯ್ತಿ ಚುನಾವಣೆಯಲ್ಲಿ ಕಡ್ಡಾಯ ಮತದಾನ 22 ರಾಷ್ಟ್ರಗಳಲ್ಲಿವೆ. ಅವುಗಳ ಪೈಕಿ 10 ರಾಷ್ಟ್ರಗಳಲ್ಲಿ ವೇತನ, ಬಡ್ತಿ, ಪಾಸ್‍ಪೋರ್ಟ್‍ಗಳಿಗೆ ಕತ್ತರಿ ಹಾಕುವ ಶಿಕ್ಷೆ ಇದೆ. ಹಾಗೆಂದು ಅದನ್ನು ಇಲ್ಲಿ ಜಾರಿಗೊಳಿಸಲು ಆಗಲ್ಲ. ಏಕೆಂದರೆ ಆ ಶಿಕ್ಷೆ ಕಾನೂನನ್ನೇ ಇಲ್ಲಿ ದುರ್ಬಳಕೆ ಮಾಡಿಕೊಂಡು ಜನರನ್ನು ಶೋಷಣೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ವಿಧೇಯಕದಲ್ಲಿ ಕಡ್ಡಾಯ ಮಾತದಾನ ಮಾಡಲಾಗಿದೆ. ಆದರೆ, ಮತದಾನ ಮಾಡದವರಿಗೆ ಏನು ಶಿಕ್ಷೆ ಎಂದು ಹೇಳಿಲ್ಲ. ಸದ್ಯಈಗಿನ ಯಾವುದೇ ಕಾಯ್ದೆ ಪ್ರಕಾರ ಮತದಾನ ಮಾಡದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಡ್ಡಾಯ ಮತದಾನ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ ಸದಸ್ಯರು ಅಭಿಪ್ರಾಯಪಟ್ಟರು. ಈ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ರಮೇಶ್ ಕುಮಾರ್ ನೇತೃತ್ವದ ವರದಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸುಧಾರಣೆ ಮಾಡಲು 88 ಅಂಶಗಳಿದ್ದವು. ಆದರೆ, ಸರ್ಕಾರ ಬರೀ 4 ಅಂಶಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ತಿದ್ದುಪಡಿ ತಂದಿರುವುದು ಸರಿಯಲ್ಲ. ಸರ್ಕಾರದ ನೀತಿಯಿಂದ ಗ್ರಾಪಂ ಸದಸ್ಯರು ಶೌಚಾಲಯದ ನೆರವಿನ ಹಣ ನೀಡುವುದಕ್ಕೂ ಶಾಸಕರನ್ನೇ ಅವಂಬಿಸುವಂತಾಗುತ್ತದೆ. ಇದರಿಂದ ಅಧಿಕಾರ ವಿಕೇಂದ್ರಿಕರಣ ಆಗಲಾರದು ಎಂದರು. ಜೆಡಿಎಸ್‍ನ ಪಟೇಲ್ ಶಿವರಾಮ್ ಮತ್ತು ಇ.ಕೃಷ್ಣಪ್ಪ ಮಾತನಾಡಿ, `ಸದನದಲ್ಲಿ ರಮೇಶ್ ಕುಮಾರ್ ವರದಿಯನ್ನು ಮಂಡಿಸಬೇಕು. ಅದನ್ನು ಮುಂದಿನ ತಿದ್ದುಪಡಿಯಲ್ಲಾದರೂ ಅಳವಡಿಸಬೇಕು' ಎಂದು ಸಲಹೆ ನೀಡಿದರು.

ಬಿಜೆಪಿಯ ಮಹಾಂತೇಶ್ ಕವಟಗಿಮಠ ಮಾತನಾಡಿ, `ಗ್ರಾಪಂ ಸದಸ್ಯರಿಗೆ ಗೌರವಧನ ಗೌರವವಾಗಿ ಸಿಗುವಂತೆ ಮಾಡಬೇಕು. ಗ್ರಾಪಂಗಳಿಗೆ ನೀಡುವ ಅನುದಾನವನ್ನು ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು' ಎಂದು ವಾದಿಸಿದರು. ಆಚಾರ್ ಹಾಲಪ್ಪ, ಈ ವಿಧೇಯಕದಿಂದ ಭ್ರಷ್ಟಾಚಾರ ಕಡಿಮೆಯಾಗುವ ಸಾಧ್ಯತೆ ಇಲ್ಲ. ಆ ಬಗ್ಗೆ ವಿಧೇಯಕದಲ್ಲಿ ಏನೂ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಸಿದ್ದರಾಮಣ್ಣ ಮಾತನಾಡಿ, `ಗ್ರಾಪಂಗಳ ಆಡಳಿತ ಸುಧಾರಣೆಯಾಗಬೇಕಾದರೆ ಅಧ್ಯಕ್ಷ, ಉಪಾಧ್ಯಕ್ಷರ ನೇರ ಆಯ್ಕೆ ನಡೆಯಬೇಕು. ಜತೆಗೆ ಗ್ರಾಪಂಗಳ ಅಧಿಕಾರದಲ್ಲಿ ಶಾಸಕರು ಹೆಚ್ಚು ಭಾಗಿಯಾಗಬೇಕು ಎನ್ನುವುದನ್ನು ಬಿಟ್ಟು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಸಿಗುವಂತಾಗಲು ಮನಸ್ಸು ಮಾಡಬೇಕು ಎಂದರು. ಒಟ್ಟಾರೆ ಎಲ್ಲಾ ಸದಸ್ಯರು ವಿಧೇಯಕನ್ನು ಸ್ವಾಗತಿಸಿ ಸಮ್ಮತಿ ಸೂಚಿಸಿದರು.

SCROLL FOR NEXT