ಜಿಲ್ಲಾ ಸುದ್ದಿ

ಬರವಣಿಗೆಗೆ ಕಟ್ಟುಪಾಡು ಸಲ್ಲದು: ಡಾ. ವಿಜಯಾ

Shilpa D

ಬೆಂಗಳೂರು: ಮಹಿಳೆಯರು ಕೌಟುಂಬಿಕ ಜೀವನ ಹಾಗೂ ಕೆಲವೊಂದು ಕಟ್ಟುಪಾಡುಗಳ ಚೌಕಟ್ಟು ಮೀರಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಸಾಹಿತಿ ಡಾ.ವಿಜಯಾ ಹೇಳಿದರು. ಅನಿಕೇತನ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೀಪಾ ಗಿರೀಶ್ ಅವರ ಅಸ್ಮಿತಾ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಮಹಿಳೆಯನ್ನು ತುಳಿಯುವ ಕೆಲಸ ಮೊದಲಿ ನಿಂದಲೂ ನಡೆಯುತ್ತಿದೆ. ಇಂತಹ ತುಳಿತವನ್ನು ಮೆಟ್ಟಿನಿಲ್ಲುವ ಧೈರ್ಯ ರೂಢಿಸಿಕೊಳ್ಳಬೇಕು. ಹೆಣ್ಣು ಬರೆದ ಕಾವ್ಯ ಗಂಡು ಬರೆದ ಕಾವ್ಯ ಎನ್ನುವುದಕ್ಕಿಂತ ನಮ್ಮ ಆಲೋಚನೆಗಳು ವಿಸ್ತಾರಗೊಳ್ಳಬೇಕು. ಸೋಲು ಗೆಲುವುಗಳನ್ನು ದಾಟಿ ಜೀವನ ಪಥದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು. ಉತ್ತಮ ಕಾವ್ಯ ರಚನೆ ಜತೆ ಪುಸ್ತಕದ ಮುಖಪುಟ, ಪುಟವಿನ್ಯಾಸಗಳು ಸಹ ಸುಂದರವಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಕೃತಿಯ ಪ್ರತಿ ಕವಿತೆಯಲ್ಲಿಯೂ ಹೆಣ್ಣಿನ ಆಸೆ, ಆಕಾಂಕ್ಷೆಗಳು, ಭಾವನೆಗಳನ್ನು ವ್ಯಕ್ತಪಡಿಸುವ ಕವಿತೆಗಳಾಗಿವೆ. ಕವನಗಳು ಚುಟುಕಾಗಿದ್ದರೂ ಅರ್ಥಪೂರ್ಣವಾಗಿ ಮತ್ತು ಪ್ರಬಲವಾಗಿ ಮೂಡಿಬಂದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಹಿತಿ ಡಾ.ಕೆ.ಷರೀಫ್ ಮಾತನಾಡಿ, ಮಹಿಳೆಯರ ಹೆಚ್ಚಿನ ಕೃತಿಗಳು ಅವರ ಆತ್ಮಕಥನಗಳಂತಿರುತ್ತವೆ ಎಂಬ ಅಪವಾದವಿದೆ. ಈ ಅಪವಾದ ದೂರವಾಗಬೇಕಿದೆ. ಕೃತಿಗಳು ಆತ್ಮಕಥನಗಳಾಗದೆ ಸಾರ್ವತ್ರಿಕವಾಗಬೇಕಿದೆ. ಅಸ್ಮಿತಾದಲ್ಲಿ ಹೆಣ್ಣಿನ ಕೆಲವೊಂದು ಕವನಗಳಲ್ಲಿ ಜೀವಪರವಾದ ಸಾಲುಗಳನ್ನು ಒಳಗೊಂಡಿದೆ. ಮೊದಲ ಪುಸ್ತಕದಲ್ಲಿಯೇ ಬಹಳ ಆಸಕ್ತಿ ವಹಿಸಿ ಅಚ್ಚುಕಟ್ಟಾಗಿ ಹೊರ ತಂದಿದ್ದಾರೆ. ಈ ಕಾರ್ಯ ಮುಂದುವರಿಯಲಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಲೇಖಕಿ ದೀಪಾ ಗಿರೀಶ್ ತಮ್ಮ ಅನುಭವ ಹಂಚಿಕೊಂಡರು.

SCROLL FOR NEXT