ಜಿಲ್ಲಾ ಸುದ್ದಿ

ಒಂದೆಂಬುದೇ ಹಿಂದೂ ಧ್ಯೇಯ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಹಿಂದೂ ಆಧ್ಯಾತ್ಮಿಕ ಮತ್ತು  ಸೇವಾ ಮೇಳವು ಭಾನುವಾರ ಕೊನೆಗೊಂಡಿತು. ಒಟ್ಟು ಐದು ದಿನಗಳ ಕಾಲ ನಡೆದ ಈ  ಸಮಾವೇಶದಲ್ಲಿ ಸಂಸ್ಕಾರ ಪ್ರಸರಣ, ಸನಾತನ ಹಿಂದೂ ಧರ್ಮದ ಸಂರಕ್ಷಣೆ ಹಾಗೂ ಹಿಂದೂ ಸಂಘಟನೆಗಳು ಕೈಗೊಂಡಿರುವ ಸೇವಾ ಕೈಂಕರ್ಯಗಳ ಬಗೆಗೆ ಮಾಹಿತಿ  ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸ್ಕೃತ ಭಾರತೀ ಸಂಘಟನಾ  ಕಾರ್ಯದರ್ಶಿ ದಿನೇಶ್ ಕಾಮತ್, ``ಹಿಂದೂ ಧರ್ಮ ಎಂದರೆ ಎಲ್ಲರೂ ಒಂದೇ ಎಂದರ್ಥ. ಇಲ್ಲಿ ಅಸ್ಪೃಶ್ಯರು, ಪೌರ ಕಾರ್ಮಿಕರು ಎಂಬುದಿಲ್ಲ. ಅವರೆಲ್ಲರನ್ನು ಒಟ್ಟಿಗೆ ನೋಡುವುದು, ಮಕ್ಕಳಿಗೆ  ಚಿಕ್ಕಂದಿನಿಂದಲೇ ಸಂಸ್ಕಾರ ಕಲಿಸುವುದು, ಸಂಸ್ಕೃತ ಅಧ್ಯಯನ ಮಾಡುವುದು, ಆಯುರ್ವೇದ   ಕಲಿಸುವುದು, ಯೋಗಾಭ್ಯಾಸ ಮಾಡುವುದು, ಧ್ಯಾನಸ್ಥರಾಗುವುದು ಹಿಂದೂ ಧರ್ಮದ  ಕೊಡುಗೆಗಳು. ಇವುಗಳನ್ನು  ಅನುಷ್ಠಾನಕ್ಕೆ ತರಬೇಕಾದದ್ದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ,'' ಎಂದರು.

ಅಸಹಿಷ್ಣುತೆ ಇಲ್ಲ: ಹಿಂದೂ ಧರ್ಮದಲ್ಲಿ ಅಸಹಿಷ್ಣುತೆ ಇಲ್ಲ. ಯಾರು ಅಸಹಿಷ್ಣುತೆ  ಎನ್ನುತ್ತಿದ್ದಾರೋ ಅಂಥವರ ಮೇಲೆ ಅಸಹಿಷ್ಣುತೆ ತೋರಬೇಕು. ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ  ಸೇರಿಸಬಾರದು. ಅವರನ್ನು ಅಲ್ಲಿ ಓದಿಸಿದರೆ, ಬೆಳೆದು ದೊಡ್ಡವರಾದ ನಂತರ  ನಿಮ್ಮನ್ನು  ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಬದುಕಿದಷ್ಟು ದಿನ ಯಾವುದೇ ಫಲಾಪೇಕ್ಷೆ ಇಲ್ಲದೆ  ಬಡವರಿಗೆ ಸಹಾಯ ಮಾಡಬೇಕು. ದೇವಸ್ಥಾನದಲ್ಲಿ ಸ್ತೋತ್ರ ಹೇಳಿಕೊಡಬೇಕು. ಮಠಗಳು ಮಾಡುತ್ತಿರುವ ತ್ರಿವಿಧ ದಾಸೋಹಗಳನ್ನು ನಾವು ಮಾಡುವಂತಾಗಬೇಕು ಎಂದು  ಅವರು ಕರೆ ನೀಡಿದರು. 

ವಿವಿಧ ದೇಶಗಳು ಹಲವು ಪ್ರಯತ್ನ ಮಾಡಿ ಮಂಗಳಯಾನ  ಕೈಗೊಂಡವು. ಅದೇ ಭಾರತ ಒಂದೇ ಪ್ರಯತ್ನದಲ್ಲಿ ಸಫಲವಾಯಿತು. ಇದು ಸಾಧ್ಯವಾಗಿದ್ದು   ಸನಾತನದ ಧರ್ಮ ಹಾಕಿಕೊಟ್ಟ ವಿರ ಪರಂಪರೆಯಿಂದ.
ಮೈಲಸ್ವಾಮಿ ಅಣ್ಣಾದೊರೈ ಇಸ್ರೋ ವಿಜ್ಞಾನಿ

ಸ್ವಧರ್ಮ ನಿಷ್ಠರಾಗಿ, ಪರಧರ್ಮ ಸಹಿಷ್ಣುಗಳಾಗಿ ನಾವು ಬದುಕಬೇಕು. ಆದರ್ಶ ಗೃಹಸ್ಥ  ಕುಟುಂಬಗಳು ಧರ್ಮ ಉಳಿಸಲು ಮುಂದಾಬೇಕು. 
● ಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠ

SCROLL FOR NEXT