ಮಂಡ್ಯದ ಗುರುಶ್ರೀ ಚಿತ್ರಮಂದಿರದ ಬಳಿ ರೈತರ ಪ್ರತಿಭಟನೆ
ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ಗುರುವಾರ ಭರ್ಜರಿಯಾಗಿಯೇ ತೆರೆಕಂಡಿದೆಯಾದರೂ. ಮಂಡ್ಯದಲ್ಲಿ ಮಾತ್ರ ಚಿತ್ರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ.
ನಟ ಯಶ್ ಹಾಗೂ ಅವರ ಆಪ್ತ ಸೂರಿ ಅವರು ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಂಡ್ಯದಲ್ಲಿ ಕೆಲ ರೈತರಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಇಂದು ತೆರೆಕಂಡು ಮಾಸ್ಟರ್ ಪೀಸ್ ಚಿತ್ರ ಪ್ರದರ್ಶನಕ್ಕೂ ಅಡ್ಡಿ ಪಡಿಸಲಾಗುತ್ತಿದೆ. ಮಂಡ್ಯದ ಗುರುಶ್ರೀ ಚಿತ್ರ ಮಂದಿರದ ಎದುರು ಸೇರಿರುವ ರೈತರು ನಟ ಯಶ್ ಈ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಅವರ ಮಾಸ್ಟರ್ ಪೀಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಲಾಗುತ್ತದೆ. ಅಲ್ಲದೆ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುಶ್ರೀ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮಾಸ್ಟರ್ ಪೀಸ್ ಚಿತ್ರದ ಪ್ರದರ್ಶನ ನಡೆಯುತ್ತಿದ್ದು, ಪ್ರತಿಭಟನಾಕಾರರು ಚಿತ್ರಮಂದಿರದ ಮುಂದೆ ಹಾಕಲಾಗಿದ್ದ ಯಶ್ ಅವರ ಪೋಸ್ಟರ್ ಗಳನ್ನು ಹರಿದು ಯಶ್ ಭಾವಚಿತ್ರಕ್ಕೆ ಬೆಂಕಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಅದೇ ಚಿತ್ರಮಂದಿರದಲ್ಲಿದ್ದ ಯಶ್ ಅಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈತರ ಪ್ರತಿಭಟನೆಯನ್ನು ವಿರೋಧಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಯಶ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಪೊಲೀಸರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಗೊಂಡಿದೆ.
ಪ್ರಸ್ತುತ ಸ್ಥಳದಲ್ಲಿ ಬಿಗುವಿನ ವಾತಾವರಣೆ ನಿರ್ಮಾಣಗೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos