ಜಿಲ್ಲಾ ಸುದ್ದಿ

ಕೇಂದ್ರದ ಪರಿಹಾರ ಬಂದಿಲ್ಲ: ಕೃಷಿ ಸಚಿವ

Manjula VN

ಬೆಂಗಳೂರು: ರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿ ನಿರ್ವಹಣೆಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲು, ಆದರೆ, ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಅನುದಾನವನ್ನು ನೀಡಿಲ್ಲ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬರ ಪರಿಹಾರ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದಿಂದ ಯಾವುದೇ ತಪ್ಪು ಆಗಿಲ್ಲ. ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರವು ನವೆಂಬರ್ ನಲ್ಲಿ ಹಾಗೂ ರಾಜಸ್ಥಾನ ಡಿಸೆಂಬರ್ ನಲ್ಲಿ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದೆ. ಕರ್ನಾಟಕ ಸರ್ಕಾರವು ಕಳೆದ ಆಗಸ್ಟ್ ನಲ್ಲೇ ಮನವಿ ಮಾಡಿದ್ದರೂ ಈ ವರೆಗೆ ಅನುದಾನ ಬಂದಿಲ್ಲ. ಸಿಎಂ ಹಾಗೂ ತಾವು ಹತ್ತಾರು ಬಾರಿ ಮನವಿ ಮಾಡಿದ್ದೇವೆ. ರಾಜ್ಯದ ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತ ಕುಮಾರ್, ವೆಂಕಯ್ಯ ನಾಯ್ಡು ಅವರಲ್ಲೂ ಪ್ರಸ್ಥಾಪಿಸಲಾಗಿದೆ.

ರಾಜ್ಯಕ್ಕೆ ಬಂದ ಕೇಂದ್ರ ತಂಡವು ಅಧ್ಯಯನ ನಡೆಸಿ ರು.2270 ಕೋಟಿ ಪರಿಹಾರ ನೀಡುವಂತೆ ವರದಿ ನೀಡಿತು. ರಾಜ್ಯ ಸರ್ಕಾರ ಈ ವರದಿ ಆಧರಿಸಿ ಒಟ್ಟು ರು.3850 ಕೋಟಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿತು. ಆದರೆ ಕೇಂದ್ರ ಸರ್ಕಾರ ರು. 2270 ಕೋಟಿ ಬದಲು ಪರಿಹಾರದ ಮೊತ್ತವನ್ನು ರು.1540 ಕೋಟಿಗೆ ಇಳಿಸಿತು. ಇಷ್ಟಾದರೂ ಹಣ ಬಿಡುಗಡೆಯಾಗಿಲ್ಲ ಎಂದರು.

SCROLL FOR NEXT