ಕಲ್ಬುರ್ಗಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಕಲ್ಬುರ್ಗಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ಹೊರವಲಯದ ರಾಜಾಪೂರ ರಿಂಗ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಅದೇ ರಸ್ತೆಯಲ್ಲಿ ಮುಂಬದಿಯಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಕಲ್ಬುರ್ಗಿ ಸಮೀಪದ ಶರಣಸಿರಸಗಿ ಗ್ರಾಮದವರಾದ ಮಹದೇವ ಜಂಬಗಿ(36), ಪತ್ನಿ ಗೋದಾವರಿ(30) ಮಗ ಮಲ್ಲಿಕಾರ್ಜುನ (4) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಒಂದು 4 ತಿಂಗಳ ಮಗು ಕೂಡ ಸಾವನ್ನಪ್ಪಿದೆ.
ಅಪಘಾತಕ್ಕೀಡಾದ ಕಾರು ಕುಸನೂರಿನಿಂದ ಶರಣಸಿರಸಗಿ ಗ್ರಾಮಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.