ಜಿಲ್ಲಾ ಸುದ್ದಿ

ಜಾಲ ತಾಣಗಳ ಮೇಲೆ ನಿಗಾ: ಅಧಿಕಾರಿಗಳಿಗೆ ದೆಹಲಿಯಲ್ಲಿ ತರಬೇತಿ

ಬೆಂಗಳೂರು: ಭಯೋತ್ಪಾದನೆ ಹಾಗೂ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಚರ್ಚಿಸುವ ಫೇಸ್‍ಬುಕ್, ಟ್ವಿಟರ್ ಮುಂತಾದ ಜಾಲ ತಾಣಗಳ ಮೇಲೆ ನಿಗಾ ಇರಿಸಲು ನಗರ ಪೊಲೀಸರು ಆರಂಭಿಸುತ್ತಿರುವ ಪ್ರತ್ಯೇಕ ಘಟಕಕ್ಕೆ ನಿಯೋಜಿಸಲಾಗಿರುವ 15 ಅಧಿಕಾರಿಗಳ ತಂಡ ವಿಶೇಷ ತರಬೇತಿಗಾಗಿ ದೆಹಲಿಗೆ ತೆರಳಿದೆ.

ಬೆಂಗಳೂರಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಇಸಿಸ್ ಪರ ಒಲವು ಹೊಂದಿದ್ದ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್, ಇಸಿಸ್ ಸಂಘಟನೆಯ ಕಾರ್ಯಚಟುವಟಿಕೆ ಜಿಹಾದಿ ಸಂದೇಶಗಳನ್ನು  ಟ್ವಿಟರ್ ಮೂಲಕ ಹರಿಬಿಟ್ಟು ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ. ಜನರನ್ನು ಇಸಿಸ್ ಸದಸ್ಯರನ್ನಾಗಿಸಲು ಸಾಮಾಜಿಕ ಜಾಲ ತಾಣ ಟ್ವಿಟರ್‍ಅನ್ನು ಅಸ್ತ್ರವಾಗಿ ಬಳಸಿಕೊಂಡಿದ್ದ.

ನಗರದಲ್ಲಿ ಇಂಥ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ಇರಿಸಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. ಕಿಡಿಗೇಡಿಗಳು ಟ್ವಿಟರ್, ಫೇಸ್‍ಬುಕ್‍ನಲ್ಲಿ ಹರಿಬಿಡುವ ಪ್ರಚೋದನಕಾರಿ, ನಿಂದನೆಯ ಪೋಸ್ಟ್ ಗಳ ಮೇಲೆ ಒಂದು ತಂಡ ಸದಾ ಕಣ್ಗಾವಲಿರಿಸಲಿದೆ. ಈ ಸಂಬಂಧ ತರಬೇತಿ ಪಡೆಯಲು 15 ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲಾಗಿದ್ದು, ತರಬೇತಿ ಪೂರ್ಣಗೊಳಿಸಿ ಶೀಘ್ರವೇ ನಗರಕ್ಕೆ ವಾಪಸಾಗಲಿದ್ದಾರೆ ಎಂದು ರೆಡ್ಡಿ ಹೇಳಿದರು.

SCROLL FOR NEXT