ಹುಬ್ಬಳ್ಳಿ: ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನವನ್ನು ಆಚರಿಸುವುದು ಕಂಡುಬಂದರೆ ಅವರಿಗೆ ತಾಳಿ ಕಟ್ಟಿಸಿ ಮದುವೆ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬುಧವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನವನ್ನು 'ಮಾತಾಪಿತ ಪೂಜಾ ದಿನ'ವಾಗಿ ಆಚರಣೆ ಮಾಡುವಂತೆ ಹೇಳಿದರು. ಅಲ್ಲದೆ ನಮ್ಮ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಬಾರದು, ಒಂದು ವೇಳೆ ಪ್ರೇಮಿಗಳ ದಿನ ದಂದು ಸ್ವೇಚ್ಛಾಚಾರದಲ್ಲಿ ತೊಡಗಿರುವವರು ಕಂಡು ಬಂದರೆ ಶ್ರೀರಾಮ ಸೇನೆ ಅಂತಹವರಿಗೆ ಮದುವೆ ಮಾಡಿಸುತ್ತದೆ'' ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ಇನ್ನು ಈಗಾಗಲೇ ಛತ್ತೀಸ್ಗಢ್ ಸರ್ಕಾರ ಫೆ.14ನ್ನು 'ಮಾತಾಪಿತೃ ದಿನ'ವಾಗಿ ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದ್ದು, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ದಿನದಂದು ಮಕ್ಕಳು ಪೋಷಕರಿಗೆ ಪೂಜೆ ಮಾಡಬೇಕು ಎಂದು ಸೂಚನೆ ನೀಡಿದೆ. ಮತ್ತೊಂದೆಡೆ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಅವರು ಕೂಡ ಪ್ರೇಮಿಗಳ ದಿನಾಚರಣೆ ಮಾಡಿದರೆ ಮದುವೆ ಮಾಡಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ.