ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ 14 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಚೈತನ್ಯ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದ ಮೂಡಲಪಾಳ್ಯ ನಿವಾಸಿ ಕಿರಣ್ ಯಾದವ್ ಮೃತ ಬಾಲಕ. ಫೆಬ್ರವರಿ 4ರಂದು ಕಿರಣ್ ನಾಪತ್ತೆಯಾಗಿದ್ದ. ಬಾಲಕ ಕಿರಣ್ ಮೃತದೇಹ ಜ್ಞಾನಭಾರತೀಯ ಸಾಯಿ ಮಂದಿರ ಬಳಿ ನಿನ್ನೆ ಪತ್ತೆಯಾಗಿತ್ತು.
ಶಾಲೆಗೆ ಹೋದ ಬಾಲಕ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಬಾಲಕ ಮೃತಪಟ್ಟಿರುವ ಸುದ್ದಿ ಪೋಷಕರಿಗೆ ಆಘಾತ ತಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಪೊಲೀಸರು ಆರೋಪಿ ಮಂಜುನಾಥ್ ಎಂಬುವವನ್ನು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಮೃತ ಬಾಲಕ ಕಿರಣ್ ಪಕ್ಕದ ಮನೆ ನಿವಾಸಿಯಾಗಿದ್ದು, ಕಿರಣನನ್ನು ಬೈಕ್’ನಲ್ಲಿ ಕರೆದೊಯ್ದಿದ್ದ ಚಿತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಿರಣ್ ನನ್ನು ಮಂಜುನಾಥನೇ ಅಪಹರಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಬಂಧಿತ ಆರೋಪಿ ಮಂಜುನಾಥ್ ಗೆ ಮಹಿಳೆ ಜೊತೆ ಅಕ್ರಮ ಸಂಬಂಧವಿದ್ದ ವಿಷಯ ಕಿರಣ ತಾಯಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.