ಮಾನವಿ: ಶಾಲೆಗೆ ಚಕ್ಕರ್ ಹೊಡೆಯಲು ಮಕ್ಕಳು ಹೊಟ್ಟೆನೋವಿನ ನೆಪ ಹೇಳುವುದು ಸಾಮಾನ್ಯ. ರಾಯಚೂರು ಜಿಲ್ಲೆ ಮಾನವಿ ಪಟ್ಟಣದಲ್ಲಿ ಬಾಲಕನೊಬ್ಬ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಮೈಗೆ ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಥಳೀಯ ನೇತಾಜಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದ ಗವಿಗಟ್ ಗ್ರಾಮದ ವಿನೋದಕುಮಾರ್(12 ) ಈ ಕೃತ್ಯ ಎಸಗಿಕೊಂಡ ವಿದ್ಯಾರ್ಥಿ. ಈತ ಪದೇ ಪದೇ ಶಾಲೆ ತಪ್ಪಿಸುತ್ತಿದ್ದ. ಶಿಕ್ಷಕರ ಕಣ್ಗಾವಲು ಬಿಗಿಯಾಗಿದ್ದರಿಂದ ವಿನೋದ ತಾನೇ ಅಂಗಿಗೆ ಬೆಂಕಿ ಹಚ್ಚಿಕೊಂಡ. ಉರಿ ತಾಳಲಾಗದೆ ನಳದ ಕೆಳಗೆ ಕುಳಿತು ಉರುಳಾಡಿದ. ತಕ್ಷಣ ರಾಯಚೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶೇ.40 ರಷ್ಟು ಸುಟ್ಟಗಾಯ ಆಗಿರುವುದರಿಂದ ಚಿಕಿತ್ಸೆಗೆ ದೇಹ ತಕ್ಷಣ ಸ್ಪಂದಿಸುತ್ತಿಲ್ಲ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.