ಬೆಂಗಳೂರು: ನಿಮ್ಹಾನ್ಸ್ ನ ಹಿರಿಯ ಪ್ರಾಧ್ಯಾಪಕ ಡಾ. ಸತೀಶ್ಚಂದ್ರ ಅವರನ್ನು ಹಂಗಾಮಿ ನಿರ್ದೇಶಕ ಡಾ. ಪ್ರಧಾನ್ ಅವರು ದಿಢೀರನೆ ವಜಾ ಮಾಡಿದ ಪ್ರಕರಣ ಈಗ ಹಲವು ಪ್ರತಿಭಟನೆಗಳಿಗೆ ಕಾರಣವಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿಮ್ಹಾನ್ಸ್ ಗೆ ಮಂಗಳವಾರ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಂಸ್ಥೆಯೊಳಗಿನ ಆಂತರಿಕ
ಭಿನ್ನಾಭಿಪ್ರಾಯ ಹಿರಿಯ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಡಾ. ಸತೀಶ್ ಚಂದ್ರ ವಜಾ ಸರಿಯಿಲ್ಲ ಎಂದು ವೈದ್ಯರು, ಅದಕ್ಕೆ ಪ್ರತಿಯಾಗಿ ವಜಾ ಸಮರ್ಥಿಸಿಕೊಂಡು ಡಿ ದರ್ಜೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಆಸ್ಪತ್ರೆ ಅಧಿಕಾರಿಗಳನ್ನು ಸಂಕಷ್ಟಕ್ಕೀಡು ಮಾಡಿದೆ.ರಾಷ್ಟ್ರಪತಿ ಭೇಟಿ ವೇಳೆ ಈ ಪ್ರತಿಭಟನೆಯ ಬಿಸಿ ತಟ್ಟುವ ಆತಂಕ ಅಧಿಕಾರಿಗಳದು. ಸಂಸ್ಥೆಯ ಹಂಗಾಮಿ ನಿರ್ದೇಶಕ ಡಾ.ಪ್ರಧಾನ್ ಅವರ ಕೆಲವು ಸಂಶಯಾಸ್ಪದ ನಡೆಗಳು ಸಂಸ್ಥೆಯ ಸಿಬ್ಬಂದಿ ವರ್ಗದಲ್ಲಿ ಆಕ್ರೋಶ ಮೂಡಿಸಿದೆ. ಪ್ರಮುಖವಾಗಿ ಸೇವಾವಧಿ ಮುಗಿದ ನಂತರವೂ ಹಿರಿಯ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ ಅವರ ವಜಾ ಸಿಬ್ಬಂದಿಯನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವೈದ್ಯಾಧಿಕಾರಿಗಳು, ಡಾ. ಪ್ರಧಾನ್ ಅವರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏಕೆಂದರೆ, ಪ್ರಧಾನ್ ಅವರು ನರ್ಸಿಂಗ್ ವಿಭಾಗದ ಹಾಗೂ ನ್ಯೂರೋಸರ್ಜರಿ ವಿಭಾ ಗದ ಮುಖ್ಯಸ್ಥರನ್ನು ಬದಲಾಯಿಸಿ ಅವರ ಜಾಗಕ್ಕೆ ಬೇರೊಬ್ಬರನ್ನು ತಂದು ಕೂರಿಸಿದ್ದಾರೆ.
ಸೇವಾವಧಿ ಮುಗಿದ ಯಾರೊಬ್ಬರು ಸಂಸ್ಥೆಯಲ್ಲಿ ಇರುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಡಾ. ಸತೀಶ್ ಚಂದ್ರ ಅವರನ್ನು ವಜಾ ಮಾಡಿದ್ದೂ ಇದೇ ಕಾರಣಕ್ಕಾಗಿ. ಹೀಗಾಗಿ ಸಿಬ್ಬಂದಿ ಕೆರಳಿದ್ದಾರೆ ಎಂಬುದು ಅಧಿಕಾರಿಗಳ ವಿವರಣೆ. ಸಾಮಾನ್ಯವಾಗಿ ಸತೀಶ್ ಚಂದ್ರ ಅವರಂಥ ತಜ್ಞ ವೈದ್ಯರನ್ನು ವಜಾ ಮಾಡುವಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆ, ಡಾ. ಪ್ರಧಾನ್ ಈ ಯಾವ ನಿಯಮಗಳನ್ನೂ ಪಾಲಿಸಿಲ್ಲ ಎಂಬುದು ಕೆಲ ವೈದ್ಯರ ಅಸಮಾಧಾನ. ಆದರೆ, ಈ ಕುರಿತು ಸ್ಪಷ್ಟನೆ ನೀಡುವ ಡಾ. ಪ್ರಧಾನ್, ತಾವು ಎಲ್ಲಾ ಕ್ರಮಗಳನ್ನು ನಿಯಮಾನುಸಾರ ಕೈಗೊಂಡಿದ್ದಾಗಿ ಹೇಳುತ್ತಾರೆ.