ಜಿಲ್ಲಾ ಸುದ್ದಿ

ವಿಳಂಬ ಭೇಟಿಗೆ ರಾಜ್ಯದ ಗೊಂದಲ ಮಾಹಿತಿ ಕಾರಣ

ರಾಯಚೂರು: ಅಕಾಲಿಕ ಮಳೆ ಹಾನಿಯನ್ನು ಅಂದಾಜಿಸಲು ತಡವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದಕ್ಕೆ ಗ್ರಾಪಂ ಚುನಾವಣೆ ಮತ್ತು ರಾಜ್ಯ ಸರ್ಕಾರ ಕೇಂದ್ರಕ್ಕೆ ಒದಗಿಸಿದ ಮಾಹಿತಿಯನ್ನು ಪದೇ ಪದೇ ಬದಲಿಸಿದ್ದು ಕಾರಣ ಎಂದಿರುವ ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಆರ್.ಬಿ. ಸಿನ್ಹಾ, ಕೇಂದ್ರಕ್ಕೆ ಹಾನಿಯ ಅಂದಾಜಿಸಿ ಕ್ರೋಡೀಕೃತ ವರದಿಯನ್ನು ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ನಗರ ಸಮೀಪದ ಯರಮರಸ್ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮeತನಾಡಿ, ಪ್ರಕೃತಿ ವಿಕೋಪದ ಕುರಿತು ರಾಜ್ಯ ಸರ್ಕಾರ ಮೇಲಿಂದ ಮೇಲೆ ಕೇಂದ್ರಕ್ಕೆ ವರದಿ ನೀಡಿಕೆಯಲ್ಲಿ ಬದಲಾವಣೆ ಮಾಡಿತು. ಕಳೆದ ಮೇ ತಿಂಗಳಾಂತ್ಯಕ್ಕೆ ವರದಿ ನೀಡಿದ್ದು ಅದರಂತೆಯೇ ಅಧ್ಯಯನಕ್ಕೆ ತಂಡ ಆಗಮಿಸಿದೆ. ಅಷ್ಟೇ ಅಲ್ಲ ಗ್ರಾಪಂ ಚುನಾವಣೆ ವೇಳೆ ಅಧ್ಯಯನ ಮಾಡುವುದು ಸರಿಯಲ್ಲ ಎಂಬ ಉದ್ದೇಶದಿಂದ ಪ್ರವಾಸ ವಿಳಂಬವಾಗಿದೆ ಎಂದು ತಿಳಿಸಿದರು.

ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಡಳಿತಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ಬೆಳೆ ಹಾನಿ ಕುರಿತ ಛಾಯಾಚಿತ್ರಗಳು ಮತ್ತು ಮಾಹಿತಿಯನ್ನು ತಂಡಕ್ಕೆ ಒದಗಿಸಿದ್ದು, ಹಾನಿಯ ಮನವರಿಕೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ವಿಳಂಬವಾಗಿರುವುದರಿಂದ ಹೊಲಗಳಲ್ಲಿ ಹಾನಿಯನ್ನು ಗುರುತಿಸುವುದು ಕಷ್ಟವಾದೀತು. ಆದರೆ ರೈತರೊಂದಿಗೆ ಬೆಳೆ ಹಾನಿಯ ಬಗ್ಗೆ ಸಮಾಲೋಚಿಸಿ ಮಾಹಿತಿ ಕಲೆ ಹಾಕುವುದಾಗಿ ಹೇಳಿದರು.

ಕೇಂದ್ರಕ್ಕೆ ವರದಿ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೇಂದ್ರದ ಅಧ್ಯಯನ ತಂಡಗಳು ಸಂಚರಿಸುತ್ತಿದ್ದರೂ ಅಂತಿಮವಾಗಿ ರಾಜ್ಯ ಸರ್ಕಾರದೊಂದಿಗೆ ಬುಧವಾರ ಸಮಾಲೋಚಿಸಿದ ನಂತರದಲ್ಲಿ ತಮ್ಮ ನೇತೃತ್ವದಲ್ಲಿಯೇ ವರದಿ ಸಿದ್ಧಗೊಳಿಸಿ, ಕ್ರೋಡೀಕೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

SCROLL FOR NEXT