ಜಿಲ್ಲಾ ಸುದ್ದಿ

ಮೊಬೈಲ್ ಬಳಕೆ ತಂದ ದುರಂತ ಸಾವು

Srinivasamurthy VN

ಬೆಂಗಳೂರು: ಬಸವನಗುಡಿ ಮುಖ್ಯರಸ್ತೆ ಯಲ್ಲಿ ಭಾನುವಾರ ಬೆಳಿಗ್ಗೆ ಬಿಎಂಟಿಸಿ ಬಸ್‍ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಕಾರ್ತಿಕ್ (19) ಎಂಬಾತ ಮೃತಪಟ್ಟಿದ್ದಾನೆ.

ವಿಜಯನಗರ ನಿವಾಸಿ ಕಾರ್ತಿಕ್, ಶೇಷಾದ್ರಿಪುರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ಬಸವನಗುಡಿ ಗಾಂಧಿ ಬಜಾರ್ ಕಡೆಗೆ ಹೋಗುತ್ತಿದ್ದರು. ಹೆಲ್ಮೆಟ್ ಧರಿಸದೆ, ಮೊಬೈಲ್ ಫೋನ್‍ನಲ್ಲಿ ಮಾತನಾಡಿಕೊಂಡು ಬೈಕ್ ಓಡಿಸುತ್ತಿದ್ದ ಕಾರ್ತಿಕ್, ಒಮ್ಮೆಲೆ ಬಸ್ ಎದುರಾಗಿದ್ದರಿಂದ ವಿಚಲಿತರಾಗಿ ನಿಯಂತ್ರಣ ಕಳೆದುಕೊಂಡಿರುವುದನ್ನು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಚಲಿಸಿದ ಬೈಕ್, ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಕೆಳಗೆ ಬಿದ್ದ ಕಾರ್ತಿಕ್ ಮೇಲೆ ಬಸ್‍ನ ಹಿಂದಿನ ಚಕ್ರ ಹರಿದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT