ಜಿಲ್ಲಾ ಸುದ್ದಿ

ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ

Sumana Upadhyaya

ಬೆಂಗಳೂರು: ಸ್ಮಶಾನಗಳಲ್ಲಿ ಸ್ವಚ್ಛತೆ ಕಾಪಾಡಲು ಮುಂದಿನ ಶನಿವಾರ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯ್ ಭಾಸ್ಕರ್ ತಿಳಿಸಿದರು.

ಜಗಜೀವನ್ ರಾಂ ನಗರದಲ್ಲಿ ಶನಿವಾರ ನಡೆದ 'ತೀವ್ರ ಸ್ವಚ್ಛತಾ ಅಭಿಯಾನ'ದಲ್ಲಿ ಸ್ಥಳೀಯರು, ಸ್ಮಶಾನದಲ್ಲಿ ತ್ಯಾಜ್ಯ ಹೆಚ್ಚಿರುವುದರ ಬಗ್ಗೆ ದೂರಿದರು. ಸ್ಮಶಾನದಲ್ಲಿ ತ್ಯಾಜ್ಯ ಹೆಚ್ಚಿದ್ದು, ಕಸ ಸುರಿಯಲು ಬಳಸಲಾಗುತ್ತಿದೆ. ಕೆಲವೊಮ್ಮೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸದೆ ಸ್ಮಶಾನದ ಆವರಣದೊಳಕ್ಕೆ ಎಸೆಯಲಾಗುತ್ತದೆ. ಶವಗಳನ್ನು ಹೂಳದೆ ಅಥವಾ ಸುಡದಿರುವುದರಿಂದ ದುರ್ವಾಸನೆ ಹೆಚ್ಚಿದ್ದು, ಮಾಲಿನ್ಯ ಉಂಟಾಗುತ್ತಿದೆ. ಕಳೆಗಿಡಗಳು ಸಾಕಷ್ಟು ಬೆಳೆದಿದ್ದು, ಇದು ಅಕ್ರಮ ಚಟುವಟಿಕೆಗಳಿಗೂ ಕಾರಣವಾಗಿದೆ. ಸ್ಮಶಾನವನ್ನು ಸ್ವಚ್ಛ ಮಾಡಲು ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

ಸ್ಥಳೀಯರಿಗೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ವಿಜಯ್ ಭಾಸ್ಕರ್, ಮುಂದಿನ ವಾರ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸ್ಮಶಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು. ಹೆಚ್ಚಿನ ಸ್ಮಶಾನಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಸ್ವಚ್ಛ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

SCROLL FOR NEXT