ಜಿಲ್ಲಾ ಸುದ್ದಿ

ಆದಿಚುಂಚನಗಿರಿ ಮಠದಿಂದ ಡಿ.ಕೆ.ರವಿ ಅಣ್ಣನ ಪುತ್ರನ ದತ್ತು

Srinivasamurthy VN

ಬೆಂಗಳೂರು: ಕಳೆದ ಸೋಮವಾರ ನಿಗೂಢವಾಗಿ ಸಾವಿಗೀಡಾದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಹೋದರ ಡಿಕೆ.ರಮೇಶ್‌ರವರ ಪುತ್ರ ರೋಹನ್ ಗೌಡ ಅವರನ್ನು ಆದಿಚುಂಚನಗಿರಿ ಮಠ ದತ್ತು ಪಡೆದುಕೊಂಡಿದೆ.

ಚುಂಚಶ್ರೀ ಬಳಗದ ವತಿಯಿಂದ ಸೋಮವಾರ ನಡೆದ ಡಾ.ರವಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಅದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ರವಿಯವರ ಸ್ಥಾನವನ್ನು ತುಂಬಲು  ಶ್ರೀ ಮಠ ತಕ್ಷಣದಿಂದಲೇ ಕಾರ್ಯಪ್ರವೃತ್ತ ವಾಗಲಿದ್ದು, ಅವರ ಅಣ್ಣ ಡಿ.ಕೆ.ರಮೇಶ್‌ರವರ ಮಗನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ. ಶಿಕ್ಷಣ ಮಾತ್ರವಲ್ಲದೆ ಅದರ ಜೊತೆಗೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಶ್ರೀಗಳು ತಿಳಿಸಿದರು. ರೋಹನ್ ಗೌಡ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಯನ್ನು ಆದಿಚುಂಚನಗಿರಿ ಮಠವಹಿಸಿಕೊಳ್ಳಲಿದೆ. ಆತನನ್ನು ದತ್ತು ಪಡೆದು  ಐಎಎಸ್ ಓದಿಸಿ ರವಿ ಅವರ ಮಟ್ಟಕ್ಕೆ ಏರಿಸುತ್ತೇವೆ ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.  

ಪ್ರಸ್ತುತ ಆತ ಓದುತ್ತಿರುವ ಶಿಕ್ಷಣ ಸಂಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಿ ಆತನಿಗೆ ಉನ್ನತ ಶಿಕ್ಷಣ ಹಾಗೂ ಜ್ಞಾನ ವೃದ್ದಿಗೆ ವಿಶೇಷ ಒತ್ತು ನೀಡಲಾಗುವುದು.  ಆತ ಬೆಳೆದು ಒಬ್ಬ ದಕ್ಷ ಐಎಎಸ್ ಅಧಿಕಾರಿಯಾಗಬೇಕು ಎಂಬುದು ನಮ್ಮಹಂಬಲವಾಗಿದ್ದು, ಅದೇ ರೀತಿ ಆತನನ್ನು ಈಗಿನಿಂದಲೇ ತಯಾರಿ ಮಾಡುವ ಜವಾಬ್ದಾರಿಯನ್ನು ಶ್ರೀಮಠ ವಹಿಸಿಕೊಳ್ಳಲಿದೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದರು.

SCROLL FOR NEXT