ಗುಂಡ್ಲುಪೇಟೆ: ಕಾಡಾನೆಗಳ ಹಾವಳಿ ತಡೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಗೋಪಾಲಸ್ವಾಮಿ ಬೆಟ್ಟ ಹಾಗೂ ಮದ್ದೂರು ವಲಯದಲ್ಲಿ ಅರಣ್ಯ ಇಲಾಖೆ ಆನೆ ಕಂದಕ ಕಾಮಗಾರಿ ಭರದಿಂದ ಸಾಗುತ್ತಿರುವ ಕಾರಣ ಕಾಡಾನೆಗಳ ಹಾವಳಿ ನಿಂತಿದೆ.
ಪ್ರತಿ ವರ್ಷ ಆನೆ ಹಾವಳಿಯಿಂದ ನಡೆಯುತ್ತಿದ್ದ ಪ್ರತಿಭಟನೆ ಹಾಗೂ ಬೆಳ ಹಾನಿಯಿಂದ ಉಂಟಾಗಿರುವ ಪರಿಹಾರಕ್ಕಾಗಿ ಬರುತ್ತಿದ್ದ ಅರ್ಜಿಗೆ ಬ್ರೇಕ್ ಬಿದ್ದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯವಲಯಗಳ ಪೈಕಿ ಮದ್ದೂರು ಹಾಗೂ ಗೋಪಾಲಸ್ವಾಮಿ ಬೆಟ್ಟದ ಅರಣ್ಯದಲ್ಲಿ ಕಾಡಾನೆಗಳ ಹಾವಳಿಗೆ ರೈತರ ಬೆಳೆ ನಾಶವಾಗುವುದು ಹಾಗು ಆನೆಗಳ ಅಟ್ಟ ಹಾಸಕ್ಕೆ ಮನುಷ್ಯರು ಬಲಿಯಾಗುತ್ತಿರುವುದು ಸಾಮಾನ್ಯವಾಗಿತ್ತು. ಗೋಪಾಲಸ್ವಾಮಿ ಬೆಟ್ಟ ಹಾಗು ಮದ್ದೂರು ಅರಣ್ಯವಲಯದಲ್ಲಿ ತಲಾ 12 ಕಿಮೀ ಆನೆ ಕಂದಕ ಕಾಮಗಾರಿ ಸುಮಾರು ರು.1.70 ಕೋಟಿ ಕೈಗೊಳ್ಳಲಾಗಿದ್ದು, 3 ಮೀಟರ್ ಅಗಲ, 3 ಮೀಟರ್ ಆಳ ಹಾಗು ತಳದಲ್ಲಿ 1.5 ಮೀಟರ್ ಅಳತೆಯಲ್ಲಿ ಕಂದಕ ನಿರ್ಮಾಣವಾಗಿದೆ.
ಈ ಕಾಮಗಾರಿ ಆರಂಭವಾಗಿ ಸುಮಾರು 4 ತಿಂಗಳಾಗಿದ್ದು ಮುಗಿಯುವ ಹಂತ ತಲುಪಿದ್ದು, ಈ ಅಂತರದಲ್ಲಿ ಕಾಡಾನೆಗಳು ಕಾಡು ದಾಟಿ ಬಂದೇ ಇಲ್ಲ. ಕಾಡಾನೆಗಳ ಹಾವಳಿ ತಡೆ ಗಟ್ಟಿ ಎಂದು ರೈತರು ಕೂಗಾಟವೂ ನಿಂತಿದೆ. 5 ತಿಂಗಳ ಹಿಂದೆ ಆನೆ ದಾಳಿ ನಡೆದು ಬೆಳೆ ಹಾನಿಯಾಗಿದೆ ಎಂದು ಒಂದು ಅರ್ಜಿ ಈ ಎರಡು ಅರಣ್ಯ ವಲಯದಲ್ಲಿ ಬಂದಿಲ್ಲ.
ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಂಗಳ, ಕಲೀಗೌಡನಹಳ್ಳಿ, ಮಗುವಿನಹಳ್ಳಿ, ಹುಂಡೀಪುರ, ಬೊಮ್ಮಲಾಪುರ, ಚೌಡಹಳ್ಳಿ ಹಾಗು ಮದ್ದೂರು ಅರಣ್ಯ ವಲಯದ ಬೇರಂಬಾಡಿ, ಚೆನ್ನಮಲ್ಲೀಪು, ಹೊಂಗಳ್ಳಿ, ಬರಗಿ ಸೇರಿದಂತೆ ಹತ್ತಾರು ಕಾಡಂಚಿನ ಗ್ರಾಮಗಳತ್ತ ಕಾಡಾನೆಗಳ ಸುಳಿವೇ ಇಲ್ಲದಿರುವುದು ಅರಣ್ಯ ಇಲಾಖೆಗೆ ಕಾಡಾನೆಯ ದಾಳಿಯ ಬಗ್ಗೆ ಚಿಂತನೆ ನಿಂತಿದೆ. ರು.1.70 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣ ಬಂದಿಲ್ಲ ಬಂದ ಬಳಿಕ ಮುಂದಿನ ಕೆಲಸ ಆರಂಭವಾಗುವ ಸಾಧ್ಯತೆ ಇದೆ.
ಕಾಡಾನೆಗಳ ಹಾವಳಿ ನಿಲ್ಲಲು ಪ್ರಮುಖ ಕಾರಣ ಆನೆಕಂದಕ ನಿರ್ಮಾಣವಾಗಿರುವುದು. ಆನೆ ದಾಳಿ ತಡೆಯಲು ಇಲಾಖೆ ಹಲವಾರು ಪ್ರಯೋಗ ಮಾಡಿದರೂ ಆನೆ ದಾಳಿ ನಿಲ್ಲಿಸಲು ಆಗಿರಲಿಲ್ಲ. ಕಂದಕದ ನಿರ್ಮಾಣ ಬಳಿಕ ಇಲಾಖೆಗೆ, ಕಾಡಂಚಿನ ಪ್ರದೇಶದ ರೈತರಿಗೆ ಅನುಕೂಲವಾಗುವ ಜೊತೆಗೆ ಆನೆಯ ಭಯವಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.