ಜಿಲ್ಲಾ ಸುದ್ದಿ

ಕದ್ದ ಟಿಪ್ಪರ್ ಮಾರುತ್ತಿದ್ದ ಆರು ಆರೋಪಿಗಳು ತ.ನಾಡಲ್ಲಿ ಸೆರೆ

Srinivasamurthy VN

ಬೆಂಗಳೂರು: ಕಳ್ಳತನ ಮಾಡಿದ ಟಿಪ್ಪರ್ ಲಾರಿಗಳಿಗೆ ಸಾರಿಗೆ ಅಧಿಕಾರಿಗಳ ನೆರವಿನೊಂದಿಗೆ ನಕಲಿ ದಾಖಲೆ ಸೃಷ್ಟಿಸಿ ನಗರದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತಾ-ರಾಜ್ಯ ಕಳ್ಳರ ತಂಡದ 6  ಮಂದಿಯನ್ನು ತಮಿಳುನಾಡಿನ ಸೇಲಂನಲ್ಲಿ ಬಂಧಿಸಿರುವ ಬಸವನಗುಡಿ ಪೊಲೀಸರು ಒಂದೂವರೆ ಕೋಟಿ ಮೌಲ್ಯದ ಐದು ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ರಾಜ ಅಲಿಯಾಸ್ ಪಳನಿ, ಬಾಲಕೃಷ್ಣ, ಪೂವರಗನ್, ರಾಜಾ, ಜಯಕುಮಾರ್ ಹಾಗೂ ಧನಪಾಲ್ ಬಂಧಿತರು. ಹೆದ್ದಾರಿಗಳಲ್ಲಿ, ನಿರ್ಮಾಣ ಹಂತದ ಕಟ್ಟಡಗಳ ಬಳಿ,  ಮನೆ ಮುಂದೆ ನಿಲ್ಲಿಸಿರುವ ಐದು ಟಿಪ್ಪರ್‍ಗಳನ್ನು ಆರೋಪಿಗಳು ಕಳವು ಮಾಡಿದ್ದರು. ಬಳಿಕ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಕದ್ದ ವಾಹನಗಳನ್ನು ಮರು ನೋಂದಣಿ  ಮಾಡಿಸಿಕೊಂಡಿದ್ದರು. ಅದಕ್ಕಾಗಿ ಅಲ್ಲಿನ ಸಾರಿಗೆ ಅಧಿಕಾರಿಗಳಿಗೆ ಪ್ರತಿ ವಾಹನ ಮರು ನೋಂದಣಿಗೆ ರು.40 ಸಾವಿರ ಹಣ ನೀಡುತ್ತಿದ್ದರು ಎಂದು ಅಧಿಕಾರಿ ಹೇಳಿದರು.

ಕೆಲ ವ್ಯಕ್ತಿಗಳು ಟಿಪ್ಪರ್‍ಗಳನ್ನು ಅನುಮಾನಾಸ್ಪದವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಂಡವೊಂದನ್ನು ತಮಿಳುನಾಡಿಗೆ ಕಳುಹಿಸಿ  ಆರೋಪಿಗಳನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನಗಳನ್ನು ಎಲ್ಲಿ ಕಳ್ಳತನ ಮಾಡಲಾಗಿದೆ ಹಾಗೂ ಅದರ ಮಾಲೀಕರು ಯಾರು ಎನ್ನುವ ಬಗ್ಗೆ ಪರಿಶೀಲನೆ ನಡೆದಿದೆ  ಎಂದು ಅಧಿಕಾರಿ ಹೇಳಿದರು.

ದೊಡ್ಡ ಅಧಿಕಾರಿಗಳ ಕೈವಾಡ: ಆರೋಪಿಗಳು ತಮಿಳುನಾಡು ಸಾರಿಗೆ ಇಲಾಖೆಯ ದೊಡ್ಡಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಕಳವು ಮಾಡಿದ್ದ ವಾಹನಗಳಿಗೆ  ನಕಲಿ ದಾಖಲೆಗಳನ್ನು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸೃಷ್ಟಿಸಿ ನೋಂದಣಿ ಮಾಡಲು ನೆರವಾಗುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ  ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೋರಲಾಗಿದೆ. ಅಲ್ಲದೇ, ಪ್ರಕರಣದಲ್ಲಿ ಭಾಗಿಯಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಪತ್ತೆ ಕಾರ್ಯ ನಡೆದಿದೆ.

ಅವರು ಪತ್ತೆಯಾದರೆ, ಈ ರೀತಿ ಎಷ್ಟು ವಾಹನಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆನ್ನುವುದು ಬಹಿರಂಗವಾಗಲಿದೆ ಎಂದು ಅಧಿಕಾರಿ ಹೇಳಿದರು. ಆರೋಪಿಗಳು  ವೃತ್ತಿಪರರಾಗಿದ್ದು ಬೇರೆ ಬೇರೆ ರಾಜ್ಯಗಳಲ್ಲಿ ಇವರ ವಿರುದ್ಧ ಕೇಸ್‍ಗಳು ದಾಖಲಾಗಿವೆ. ಇವರು ಬೆಂಗಳೂರಿನಲ್ಲೂ ಯಾವುದಾದರೂ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎನ್ನುವ  ಬಗ್ಗೆ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT