ಜಿಲ್ಲಾ ಸುದ್ದಿ

ವಿಧಾನಮಂಡಲ ಕಲಾಪ ನಾಳೆಗೆ ಮುಂದೂಡಿಕೆ

Sumana Upadhyaya

ಬೆಂಗಳೂರು:ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು, ಇಂದಿನ ಕಲಾಪದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ದೇವದುರ್ಗ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ ಹಲವು ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂತಾಪ ಸೂಚನೆ ಬಳಿಕ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ಇಂದು ಬೆಳಗ್ಗೆ ಕೆಳಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ನವಲಗುಂದ ಕ್ಷೇತ್ರದ ಜೆಡಿಎಸ್ ಶಾಸಕ ಕೋನರೆಡ್ಡಿ ಪ್ಲೇ ಕಾರ್ಡ್ ಹಿಡಿದು ಅಧಿವೇಶನಕ್ಕೆ ಪ್ರವೇಶಿಸಿದ್ದರು. ಜನರ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರನ್ನು ಒದಗಿಸುವಂತೆ ಆಗ್ರಹಿಸಿ ಕೋನರೆಡ್ಡಿ ಧರಣಿ ನಡೆಸಿದರು. ಕಲಾಪದಲ್ಲಿ  ಕಳೆದ ಕಲಾಪ ನಂತರ ಸಾವನ್ನಪ್ಪಿದ್ದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಫ್ರಾನ್ಸ್ ನಲ್ಲಿ ಮೊನ್ನೆ ಐಸಿಸ್ ಉಗ್ರರಿಂದ ಸಾವನ್ನಪ್ಪಿದವರಿಗೂ ಸಂತಾಪ ಸೂಚಿಸಲಾಯಿತು.

ಸಂತಾಪ ಸೂಚಕದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಚಿಂತಕ ಡಾ.ಎಂಎಂ ಕಲಬುರ್ಗಿಯವರ ಸಾವಿಗೆ ಅವರ ನೇರ, ನಿಷ್ಠುರವಾದವೇ ಕಾರಣ ಎಂದು ಹೇಳಿದರು.ನಂತರ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಸವಣ್ಣನ ಅವರ ಭಾವಚಿತ್ರಗಳನ್ನು ವಿಧಾನಪರಿಷತ್ ನಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಬಸವಣ್ಣನವರ ವಚನವನ್ನು ಪಠಿಸಿದರು.

ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ವಿಧಾನಸೌಧ ಮೊಗಶಾಲೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಶಾಸಕರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ ಘಟನೆಯೂ ಇಂದು ನಡೆಯಿತು.

SCROLL FOR NEXT