ಚಾಮರಾಜನಗರ: ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದವರ ಮೇಲೆ ಟಾಟಾ ಏಸ್ ವಾಹನ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ನಡೆದಿದೆ.
ಮಾದಾಪುರ ಗ್ರಾಮದ ಸತ್ಯರಾಜ್, ಭಕ್ತರಾಜೇಂದ್ರ ಪ್ರಸಾದ್ ಹಾಗೂ ಜೇಮ್ಸ್ ಎಂಬುವವರೇ ಮೃತ ದುರ್ದೈವಿಗಳು.
ಈ ಮೂವರು ಪ್ರತಿನಿತ್ಯ ಮಾದಾಪುರದಿಂದ ಭೋಗಾಪುರಕ್ಕೆ ವಾಕಿಂಗ್ ಹೋಗಿ ಬರುತ್ತಿದ್ದರು. ಅದೇ ರೀತಿ ಇಂದು ಸಹ ವಾಕಿಂಗ್ ಮಾಡಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಸಂತೇಮಾರನಹಳ್ಳಿಯಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಟಾಟಾ ಏಸ್ ಹಿಂದಿನಿಂದ ಡಿಕ್ಕೆ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಟಾಟಾ ಏಸ್ ಚಾಲಕ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.