ಬೆಂಗಳೂರು: ಗಾಂಧೀಜಿ ಅವರ ಗ್ರಾಮ ಭಾರತ ಚಿಂತನೆಗಳನ್ನು ಅಂಬೇಡ್ಕರ್ ಮತ್ತು ಟ್ಯಾಗೋರ್ ಚಿಂತನೆಗಳ ಜೊತೆಯಲ್ಲಿ ವಿಸ್ತರಿಸಿಕೊಳ್ಳಬೇಕಾಗಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿಸಲಯ್ಯ ಹೇಳಿದರು.
ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಗಾಂಧೀಜಿ ಮತ್ತು ಗ್ರಾಮ ಭಾರತ: ಸಮಕಾಲೀನ ಸಂವಾದ'ದಲ್ಲಿ ಮಾತನಾಡಿ, ಗಾಂಧೀಜಿ ಅವರ ಗುಡಿ ಕೈಗಾರಿಕೆಗಳು ಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿವೆ. `ಭಾರತವು ನಗರೀಕರಣಕ್ಕೆ ಹೊಂದಿಕೊಳ್ಳಲಾರದು' ಎಂಬ ಗಾಂಧೀಜಿಯವರ ಮಾತು ಇಂದು ನಗರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಸ್. ಆರ್. ಕೇಶವ್, ಗಾಂಧಿ ರೂಪಿಸಿದ ಖಾದಿ ಸಂಸ್ಥೆ ಉಳಿಸಲು ಸರ್ಕಾರ ಖಾದಿ ಗ್ರಾಮೋದ್ಯೋಗ ಮಂಡಳಿಗಳಿಂದ ಸಮವಸ್ತ್ರಗಳನ್ನು ಖರೀದಿಸಬೇಕು. ಎಲ್ಲಾ ಸರ್ಕಾರಿ ನೌಕರರು ವಾರದಲ್ಲಿ ಒಂದು ದಿನ ಖಾದಿ ವಸ್ತ್ರ ತೊಡಬೇಕು ಎಂದು ಹೇಳಿದರು. ಬೆಂವಿವಿ. ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ಡಾ.ನಟರಾಜ್ ಹುಳಿಯಾರ್ ಇದ್ದರು.