ಯಾಕೆ ಕಾಡುತಿದೆ ಸುಮ್ಮನೆ ನನ್ನನು ಕೃತಿ ಲೋಕಾರ್ಪಣೆ
ಬೆಂಗಳೂರು: ಪ್ರತಿಯೊಂದು ಭಾಷೆಯ ನಿಜವಾದ ಸಾಮರ್ಥ್ಯವಿರುವುದು ಭಾಷಾಪಯೋಗಿ ಗುಣದಲ್ಲಿ ಎಂದು ಕೆವೈ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ (ಅಕ್ಟೋಬರ್ 18)ರಂದು ಅಂತರ್ಜಾಲ ಪತ್ರಿಕೆ ಅವಧಿಯ ಸಂಯೋಜಕಿ ಎನ್ ಸಂಧ್ಯಾರಾಣಿಯವರ ಚೊಚ್ಚಲ ಕೃತಿ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈ ಕೃತಿ ಆಡದೇ ಇರುವ ಪಿಸುಮಾತು ಎಂದಿದ್ದಾರೆ.
ಹೃದಯಂಗಮವಾದ ಬರವಣಿಗೆ ಸಂಧ್ಯಾ ಅವರದ್ದು. ಇಡೀ ಕೃತಿಯಲ್ಲಿ ಮಾರ್ದವತೆ ಇದೆ, ಅದು ಓದುಗರನ್ನು ಕಾಡುತ್ತದೆ ಎಂದು ಚಂದ್ರಶೇಖರ್ ಆಲೂರ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಸಂಧ್ಯಾ ಅವರ ಬರಹಗಳು ಕನ್ನಡದ ಬಾವುಲ್ ಎಂದು ಜಿಎನ್ ಮೋಹನ್ ಹೇಳಿದ್ದು, ಕೃತಿ ಪರಿಚಯ ಮಾಡಿದ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ ಅವರು ಯಾಕೆ ಕಾಡುತಿದೆ ಸುಮ್ಮನೆ ನನ್ನನು ಕೃತಿ ಮಾನವೀಯ ಸಂಬಂಧಗಳನ್ನು ಹುಡುಕುತ್ತಿರುವ ಹೆಣ್ಣೊಬ್ಬಳ ಒಳದನಿ ಎಂದು ಹೇಳಿದ್ದಾರೆ.
ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ನನ್ನೊಳಗಿನ ಮಾತುಗಳನ್ನು ಅಂಕಣದಲ್ಲಿ ದಾಖಲಿಸುತ್ತಾ ಹೋದೆ. ಓದುಗರ ಪ್ರೀತಿ, ಪ್ರೋತ್ಸಾಹ ನನ್ನನ್ನು ಮತ್ತಷ್ಟು ಬರೆಯುವಂತೆ ಮಾಡಿತು. ಅಂಕಣ ಬರೆಯುವ ಮೂಲಕ ನನ್ನ ದೃಷ್ಟಿಕೋನಗಳೂ ಬದಲಾಗುತ್ತಾ ಹೋದವು ಎಂದು ಲೇಖಕಿ ಸಂಧ್ಯಾರಾಣಿ ತಮ್ಮ ಕೃತಿ ರೂಪುಗೊಂಡ ಬಗೆಯನ್ನು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕೆವೈ ನಾರಾಯಣ ಸ್ವಾಮಿ, ಈಟಿವಿ ನ್ಯೂಸ್ ಕನ್ನಡದ ಪ್ರಧಾನ ಸಂಪಾದಕರಾದ ಜಿಎನ್ ಮೋಹನ್, ಚಂದ್ರಶೇಖರ ಆಲೂರು, ಜಯಶ್ರೀ ಕಾಸರವಳ್ಳಿ ಮತ್ತು ಪಲ್ಲವ ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಯಾಕೆ ಕಾಡುತಿದೆ ಸುಮ್ಮನೆ ನನ್ನನು ಪುಸ್ತಕವನ್ನು ಪಲ್ಲನ ಪ್ರಕಾಶನ ಪ್ರಕಟಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos