ಜಿಲ್ಲಾ ಸುದ್ದಿ

ಬುಲೆಟ್‍ಪ್ರೂಫ್ ಜಾಕೆಟ್ ಧರಿಸಿ ನ್ಯಾಯಾಲಯಕ್ಕೆ ಬಂದ ರಾಜ

Shilpa D

ಬೆಂಗಳೂರು: ವ್ಯಾಪಾರಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜನನ್ನು ಶಿವಮೊಗ್ಗ ಪೊಲೀಸರು ಬುಧವಾರ ನಗರದ ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದರು. ಆದರೆ, ಆತನಿಗೆ ಪ್ರಾಣ ಬೆದರಿಕೆ ಇರುವ ಕಾರಣ ಬುಲೆಟ್ ಪ್ರೂಫ್  ಜಾಕೆಟ್ ಧರಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ವಿಶೇಷವಾಗಿತ್ತು.

ಶಿವಮೊಗ್ಗದ ವಿನೋಬ ನಗರದ ಠಾಣೆಯಲ್ಲಿ ಅಡಿಕೆ ವ್ಯಾಪಾರಿ ಓಂಕಾರಪ್ಪ ಎಂಬುವವರು 2014ರಲ್ಲಿ ಬನ್ನಂಜೆ ರಾಜನ ವಿರುದ್ಧ ದೂರು ದಾಖಲಿಸಿದ್ದರು. ತನಗೆ ಆತನಿಂದ ಪ್ರಾಣ ಬೆದರಿಕೆ ಇದ್ದು, ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದರು. ಆದರೆ, ಬನ್ನಂಜೆ ರಾಜ ವಿದೇಶದಲ್ಲಿದ್ದ ಕಾರಣ ಬಂಧಿಸಲು ಸಾಧ್ಯವಾಗಿರಲಿಲ್ಲ.

ಆತನನ್ನು ಬಂಧಿಸಿ ಸ್ವದೇಶಕ್ಕೆ ಕರೆತಂದ ನಂತರ, ಕೊಲೆ ಬೆದರಿಕೆ ಪ್ರಕರಣ ಸಂಬಂಧ ಆತನನ್ನು 5 ದಿನಗಳ ಹಿಂದೆ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಹಾಗೂ ಪೊಲೀಸ್ ವಶದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 6 ಗಂಟೆ ವೇಳೆಗೆ ಶಿವಮೊಗ್ಗದಿಂದ ಆತನನ್ನು ಕರೆತಂದ ಪೊಲೀಸರು ನಗರದ ಕೋಕಾ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನಂತರ ಆತನನ್ನು ಬೆಳಗಾವಿ ಜೈಲಿಗೆ ಕರೆದುಕೊಂಡು ಹೋಗಲಾಯಿತು.

SCROLL FOR NEXT