ಮಂಡ್ಯ: ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕಿನ ಹುಲಿವಾನದಲ್ಲಿ ಸವರ್ಣೀಯರು ದಲಿತ ಸಮುದಾಯದ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ.
ಹಲವರನ್ನು ಥಳಿಸಲಾಗಿದ್ದು, ಕಲ್ಲು ತೂರಾಟ ದಿಂದಾಗಿ ಮನೆಗಳು ಜಖಂ ಗೊಂಡಿವೆ. 8 ಮಂದಿಗೆ ಗಾಯಗಳಾಗಿದ್ದು, ಮೀನಾಕ್ಷಿ ಮತ್ತು ಶ್ರುತಿ ಎಂಬುವರೂ ತೀವ್ರವಾಗಿ ಗಾಯಗೊಂಡಿದ್ದಾರೆ. ದಲಿತಕೇರಿಯ 24 ಮನೆಗಳು ಜಖಂ ಗೊಂಡಿವೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, 15 ಪೊಲೀಸರೂ ಗಾಯಗೊಂಡಿದ್ದಾರೆ.
ಗ್ರಾಮದ ದಲಿತ ಯುವಕ ಹಾಗೂ ಅದೇ ಗ್ರಾಮದ ಸವರ್ಣೀಯ ಯುವತಿ ಪ್ರೀತಿಸುತ್ತಿದ್ದರು. ಕಳೆದ ಬುಧವಾರ ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಮದುವೆಗೆ ಯುವತಿಯ ಪೋಷಕರ ವಿರೋಧವಿತ್ತು. ಕೊನೆಗೆ ಯುವತಿ ಯು ಇನ್ನು ಮುಂದೆ ಮನೆಗೆ ಬರಬಾರದು ಎಂದು ಆಕೆಯಿಂದ ಮುಚ್ಚಳಿಗೆ ಬರೆಸಿ, ಮದುವೆಗೆ ಒಪ್ಪಿಗೆ ನೀಡಿದ್ದರು. ಈ ನಡುವೆ ಸಂತೋಷ್ ನ ಸ್ನೇಹಿತ ಪ್ರದೀಪ್ ಎಂಬುವವರ ಮನೆ ಮೇಲೆ ಬುಧವಾರ ರಾತ್ರಿ ಕೆಲವು ಮಂದಿ ಕಲ್ಲು ತೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರದೀಪ್ ಪ್ರಕರಣ ದಾಖಲಿಸಿದ್ದರು.
ಕುಪಿತಗೊಂಡ ಸವರ್ಣೀಯರ ಗುಂಪು ಗುರುವಾರ ರಾತ್ರಿ ದಲಿತರ ಕೇರಿಗೆ ನುಗ್ಗಿ ದಾಂಧಲೆ ನಡೆಸಿ, ಸಿಕ್ಕವರನ್ನು ಥಳಿಸಿದೆ. ಮನೆಗಳಿಗೆ ನುಗ್ಗಿ ವಸ್ತುಗಳನ್ನೆಲ್ಲ ನಾಶ ಮಾಡಲಾಗಿದೆ. ಅಲ್ಲದೆ, 2 ಬೈಕ್ಗಳಿಗೆ ಬೆಂಕಿ ಇಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲಿಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರಕ್ಕೆ ಮುಂದಾದರು. ಉದ್ರಿಕ್ತರ ಗುಂಪು ಪೊಲೀಸರ ಮೇಲೂ ಕಲ್ಲ ತೂರಿದೆ. ಪರಿಣಾಮ 15 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗ್ರಾಮದ 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಬಂದೋಬಸ್ತ್: ಹುಲಿವಾನ ಗ್ರಾಮದಲ್ಲಿ ಉಂಟಾಗಿರುವ ಪ್ರಕ್ಷುಬ್ದ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೆÇಲೀಸ್ ವರಿಷ್ಠಾ„ಕಾರಿ ಪುಟ್ಟಮಾದಯ್ಯ, ಡಿವೈಎಸ್ಪಿ ಉದೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos