ಬೆಂಗಳೂರು: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಕ್ರಮಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ವಿವಿಯಲ್ಲಿ ಕಳೆದ ಐದಾರು ವರ್ಷಗಳಿಂದ ಒಂದಲ್ಲ ಒಂದು ಅಕ್ರಮಗಳು, ಹಗರಣಗಳು ನಡೆಯುತ್ತಲೇ ಇದೆ. ಆದರೆ ಸಚಿವರು ಯಾವುದೇ ಕಠಿಣ ಕ್ರಮಕ್ಕೂ ಮುಂದಾಗಿಲ್ಲ. ಯಾವ ತನಿಖೆಯನ್ನೂ ಚುರುಕುಗೊಳಿಸಲು ಮುಂದಾಗಿಲ್ಲ. ಎಲ್ಲಾ ಅಕ್ರಮಗಳ ವಿಚಾರವಾಗಿ ಸಚಿವರು ಜಾಣಮೌನ ವಹಿಸುತ್ತಿದ್ದಾರೆ. ಅಂದರೆ ವಿವಿಯ ಅಕ್ರಮಗಳಲ್ಲಿ ಸಚಿವರೂ ಶಾಮೀಲಾಗಿರುವ
ಸಾಧ್ಯತೆ ಇದೆ. ಆದ್ದರಿಂದ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಒತ್ತಾಯಿಸಿದ್ದಾರೆ.
ವಿವಿಯಲ್ಲಿ ಪ್ರವೇಶ ಮತ್ತು ಪರೀಕ್ಷೆ ಸಂದರ್ಭಗಳಲ್ಲಿ ನಡೆದಿರುವ ಅಕ್ರಮಗಳಲ್ಲದೆ ಗ್ರಂಥಾಲಯ, ವಿವಿಧ ರೀತಿಯ ಠೇವಣಿಗಳಲ್ಲಿ ಅಕ್ರಮ ನಡೆದಿದೆ. ಒಟ್ಟಾರೆ ವಿವಿಯಲ್ಲಿ ರು.134ಕೋಟಿ ಅವ್ಯವಹಾರ ನಡೆದಿದ್ದು, ಇದು ಸಿಎಜಿ ವರದಿಯಿಂದಲೇ ಪತ್ತೆಯಾಗಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಯ್ದೆ ಆರಂಭವಾದ ಕಾಲದಿಂದಲೂ ನಿಯಮ ಪ್ರಕಾರ ಅಗತ್ಯ ಸಿಬ್ಬಂದಿ ನೇಮಕ ಆಗಿಲ್ಲ. ವಿವಿಯಲ್ಲಿ ನಡೆದಿರುವ ಅನೇಕ ಪರೀಕ್ಷೆ ಸಂದರ್ಭದಲ್ಲಿ ಅಕ್ರಮಗಳು ನಡೆದಿವೆ. ಮೌಲ್ಯ ಮಾಪನ ಅಕ್ರಮ ಮತ್ತು ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಹಲವಾರು ಅಕ್ರಮಗಳು ಬಯಲಾಗಿದೆ.
ಈ ಅಕ್ರಮಗಳು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಮೂರ್ನಾಲ್ಕು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಇದೆಲ್ಲದಕ್ಕೂ ಸಚಿವರು ಹಾರಿಕೆ ಉತ್ತರ ನೀಡುತ್ತಾ ಬಂದಿದ್ದಾರೆಯೇ ವಿನಃ ಈತನಕ ಯಾವುದೇ ತಪ್ಪಿತಸ್ಥರ ವಿರುದಟಛಿ ಕ್ರಮಕೈಗೊಂಡಿಲ್ಲ. ಸೂಕ್ತ ತನಿಖೆಯನ್ನೂ ನಡೆಸಿ ಅಧಿಕಾರಿಗಳಿಗೆ ಚಾಟಿ ಬೀಸುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಇವರು ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದರು.