ಕಲಬುರ್ಗಿ: ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿಗ್ರಹದ ಜೊತೆಗೆ ಭಕ್ತನೂ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಶಹಾಬಜಾರ್ ಬಡಾವಣೆಯ ಗಂಧಿಗುಡಿ ಗಲ್ಲಿಯ ನಿವಾಸಿ ಮಲ್ಲಿಕಾರ್ಜುನ ಶರಣಪ್ಪ ಅಂಬರೇಗೋಳ (27) ಮೃತ ಯುವಕ. ವಿಸರ್ಜನಾ ಬಾವಿಗುಂಟ, ದಂಡೆಯಲ್ಲಿ, ನಾಲ್ಕು ದಿಕ್ಕುಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರೂ ಗಣೇಶ ವಿಗ್ರಹದ ಜೊತೆಗೆ ಮಲ್ಲಿಕಾರ್ಜುನ ಅದ್ಯಾವಾಗ ನೀರಿಗೆ ಬಿದ್ದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಮಲ್ಲಿಕಾರ್ಜುನನೊಂದಿಗೆ ಇನ್ನಿಬ್ಬರು ನೀರಿಗೆ ಬಿದ್ದಿದ್ದಾರೆ, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ತಮ್ಮ ಜೊತೆಗೆ ಮಲ್ಲಿಕಾರ್ಜುನ ಅಂಬರೇಗೋಳ ನೀರಿಗೆ ಬಿದ್ದಿದ್ದನ್ನು ಅವರು ಜ್ಞಾಪಿಸಿದಾಗ ಅವಘಡ ನಡೆದಿರುವುದು ಗಮನಕ್ಕೆ ಬಂದಿದೆ.