ಜಿಲ್ಲಾ ಸುದ್ದಿ

ಬೈಸಿಕೊಳ್ಳುವ ಭಯದಲ್ಲಿ ಕಿಡ್ನ್ಯಾಪ್ ನಾಟಕ ಹೆಣೆದ

ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಹಾಗೂ ಸೈಕಲ್ ಕಳೆದುಕೊಂಡಿದ್ದಕ್ಕೆ ಪಾಲಕರು ಬಯ್ಯುತ್ತಾರೆ ಎನ್ನುವ ಭೀತಿಯಿಂದ ಬಾಲಕನೊಬ್ಬ ಗಮನ ಬೇರೆಡೆ ಸೆಳೆಯಲು ಅಪಹರಣ ನಾಟಕವಾಡಿದ ಘಟನೆ ಬುಧವಾರ ನಡೆದಿದೆ.

ಪಾಪರೆಡ್ಡಿ ಪಾಳ್ಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕನ ತಂದೆ ಕೆಲ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪಾಲಕರು ಕೊಡಿಸಿದ ಸೈಕಲ್ ಕಳೆದುಕೊಂಡಿದ್ದ ಬಾಲಕ ಶಾಲೆಯಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ. ಈ ವಿಷಯ ಮನೆಯಲ್ಲಿ ಗೊತ್ತಾದರೆ ಬಯ್ಯುತ್ತಾರೆ ಎಂದು ಅಪಹರಣದ ಕಥೆ ಕಟ್ಟಿದ್ದ.

ಬುಧವಾರ ಮಧ್ಯಾಹ್ನ ತಾನಾಗಿಯೇ ಯಲಹಂಕಕ್ಕೆ ತೆರಳಿ ಅಲ್ಲಿಂದ ಬೇರೆಯವರ ಮೊಬೈಲ್ ಪಡೆದು ಕರೆ ಮಾಡಿ, ನನ್ನನ್ನು ಕೆಲವರು ಅಪಹರಿಸಿಕೊಂಡು ಕಾರಿನಲ್ಲಿ ಹೋಗಿದ್ದರು. ರಸ್ತೆ ಹಂಪ್ಸ್ ಬಳಿ ವಾಹನ ನಿಧಾನಗೊಂಡಾಗ ವಾಹನದಿಂದ ಜಿಗಿದು ಪಾರಾಗಿದ್ದೇನೆ. ಬೇರೆ ವಿದ್ಯಾರ್ಥಿಗಳು ವಾಹನದಲ್ಲಿದ್ದು ಅಪಹರಣಕಾರರು ಪ್ರಜ್ಞೆ ತಪ್ಪಿಸಿ ಕರೆದೊಯ್ದಿದ್ದಾರೆ ಎಂದು ಪಾಲಕರಿಗೆ ತಿಳಿಸಿದ್ದ.

ಈ ಹಿನ್ನೆಲೆಯಲ್ಲಿ ಬಾಲಕ ಹಾಗೂ ಪಾಲಕರೊಂದಿಗೆ ಕುಳಿತು ಪೊಲೀಸರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದಾದಾಗ ಸತ್ಯ ಹೇಳಿದ್ದಾನೆ. ಪಾಲಕರು ಬಯ್ಯುತ್ತಾರೆ ಎನ್ನುವ ಕಾರಣಕ್ಕೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT