ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಮ್ಮ ತವರಿನಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಮದ್ದೂರು ತಾಲೂಕಿನ ಸೋಮನಹಳ್ಳಿಯಿಂದ ಕೊಳಗೇರೆ ಗ್ರಾಮದವರೆಗೆ ಬರುವ ಸುಮಾರು 68 ಹಳ್ಳಿಗಳಿಗೆ ಕೊಕ್ಕರೆ ಬೆಳ್ಳೂರು ಬಳಿಯಿಂದ ಶುದ್ದ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಅವರು ಪತ್ರ ಬರೆದು ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಾವು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ 10 ವರ್ಷ ಕಳೆದರೂ ಸದರಿ ಕಾಮಗಾರಿಯೂ ಪೂರ್ಣಗೊಳ್ಳದೆ ಕುಂಠಿತಗೊಂಡಿದೆ. ಈ ಗ್ರಾಮಗಳ ಕುಡಿಯುವ ನೀರಿನ ಬವಣೆ ಮುಂದುವರೆದಿದೆ. ಇತ್ತೀಚೆಗೆ ಮದ್ದೂರು ತಾಲೂಕಿನ ಪ್ರದೇಶದಲ್ಲಿ ಪ್ರವಾಸದಲ್ಲಿದ್ದಾಗ ಹಲವು ಗ್ರಾಮಸ್ಥರು ಕುಡಿಯುವನ ಈರಿನ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಆದ್ದರಿಂದ ಸಚಿವರು ಖುದ್ದಾಗಿ ಸದರಿ ಕಾಮಗಾರಿ ವಿಷಯವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿ 68 ಹಳ್ಳಿಗಳ ಕುಡಿಯುವ
ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಸ್ಎಂಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ. ಬಾಣೋಜಿ ಪಂತ್ ಯೋಜನೆ: ಬಾಣೋಜಿ ಪಂಥ್ ಏತ ನೀರಾವರಿ ಯೋಜನೆಯ ಯಂತ್ರೋಪಕರಣಗಳನ್ನು ಬದಲಾಯಿಸಿ ನೂತನ ಯಂತ್ರಗಳನ್ನು ಅಳವಡಿಸಿ ಕ್ರಮವಹಿಸುವಂತೆ ಕೃಷ್ಣ ಮನವಿ ಮಾಡಿದ್ದಾರೆ.